ನವದೆಹಲಿ: ‘ಧಾರ್ಮಿಕ ತಾಣಗಳಿರುವ, ವಿವಾದಾತ್ಮಕ ಭೂಮಿಯನ್ನು ಮುಸಲ್ಮಾನರು ಮತ್ತು ಇತರೆ ಧರ್ಮದವರು ಸ್ವಯಂಪ್ರೇರಿತರಾಗಿ ಹಿಂದೂಗಳಿಗೆ ಮರಳಿಸಬೇಕು’ ಎಂದು ಆರ್ಎಸ್ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಪ್ರತಿ ಮಸೀದಿಯ ಸಂಕೀರ್ಣದ ಕೆಳಗೆ ಶಿವಲಿಂಗ ಪತ್ತೆ ಮಾಡುವ ಅಗತ್ಯವಿಲ್ಲ’ ಎಂದು ಹೇಳುವ ಮೂಲಕ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿದ್ದರು’ ಎಂದರು.
‘ಸಮಾಜದಲ್ಲಿ ಪರಸ್ಪರ ಘರ್ಷಣೆ ತಪ್ಪಿಸುವುದು, ಈ ಮೂಲಕ ಸಮಾಜವನ್ನು ದ್ವೇಷ ಮತ್ತು ಹಿಂಸಾಚಾರದಿಂದ ಮುಕ್ತವಾಗಿಸುವುದು ಭಾಗವತ್ ಅವರ ಹೇಳಿಕೆಯ ಗುರಿಯಾಗಿತ್ತು. ಈ ಮಾತನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
‘ರಾಮಮಂದಿರ ಎಲ್ಲರಿಗಾಗಿ ಇದೆ. ಅದು, ರಾಷ್ಟ್ರೀಯ ದೇವಸ್ಥಾನ. ಭಾರತ ಎಲ್ಲ ಧರ್ಮವನ್ನು ಸ್ವೀಕರಿಸಿರುವ, ಎಲ್ಲ ಧರ್ಮವನ್ನು ಗೌರವಿಸುವ ದೇಶ. ಹೀಗಾಗಿ, ಇದನ್ನು ರಾಷ್ಟ್ರೀಯ ದೇಗುಲ ಎಂದು ಕರೆಯುವುದು ಸೂಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟರು.