ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ: ಎನ್‌ಸಿಇಆರ್‌ಟಿ ಶಿಫಾರಸು

ಪಠ್ಯದಿಂದಲೂ ‘ಇಂಡಿಯಾ’ಕ್ಕೆ ಕೊಕ್‌?
Published 25 ಅಕ್ಟೋಬರ್ 2023, 16:02 IST
Last Updated 25 ಅಕ್ಟೋಬರ್ 2023, 16:02 IST
ಅಕ್ಷರ ಗಾತ್ರ

ನವದೆಹಲಿ : ಒಂದರಿಂದ ಹನ್ನೆರಡನೆಯ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂಬ ಹೆಸರನ್ನು ಬಳಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ರಚಿಸಿದ್ದ ಉನ್ನತಮಟ್ಟದ ಸಮಿತಿ ಶಿಫಾರಸು ಮಾಡಿದೆ.

ಪಠ್ಯಕ್ರಮದಲ್ಲಿ ‘ಪುರಾತನ ಇತಿಹಾಸ’ದ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ವನ್ನು ಅಳವಡಿಸಬೇಕು, ಎಲ್ಲ ವಿಷಯಗಳಲ್ಲಿಯೂ ‘ಭಾರತೀಯ ಜ್ಞಾನ ವ್ಯವಸ್ಥೆ’ಯನ್ನು (ಐಕೆಎಸ್) ಅಳವಡಿಸಬೇಕು ಎಂಬ ಶಿಫಾರಸನ್ನು ಕೂಡ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಿ.ಐ. ಇಸಾಕ್ ತಿಳಿಸಿದ್ದಾರೆ.

ಆದರೆ, ಸಮಿತಿಯ ಶಿಫಾರಸು ಆಧರಿಸಿ ಯಾವುದೇ ತೀರ್ಮಾನ ಆಗಿಲ್ಲ ಎಂದು ಎನ್‌ಸಿಇಆರ್‌ಟಿ ಅಧ್ಯಕ್ಷ ದಿನೇಶ್ ಸಕ್ಲಾನಿ ತಿಳಿಸಿದ್ದಾರೆ. ‘ಎಲ್ಲ ತರಗತಿಗಳ ಪಠ್ಯಪುಸ್ತಕಗಳಲ್ಲಿಯೂ ಭಾರತ ಎಂಬ ಪದವನ್ನು ಬಳಸಲು ಸಮಿತಿಯು ಸರ್ವಸಮ್ಮತಿಯ ಶಿಫಾರಸು ಮಾಡಿದೆ’ ಎಂದು ಇಸಾಕ್ ಅವರು ಹೇಳಿದ್ದಾರೆ.

‘ಭಾರತ ಎಂಬುದು ಬಹಳ ಹಳೆಯ ಹೆಸರು. ಏಳು ಸಾವಿರ ವರ್ಷಗಳಷ್ಟು ಹಳೆಯದಾದ ವಿಷ್ಣು ಪುರಾಣದಂತಹ ಪುರಾತನ ಪಠ್ಯಗಳಲ್ಲಿ ಭಾರತ ಪದವನ್ನು ಬಳಸಲಾಗಿದೆ’ ಎಂದು ಇಸಾಕ್ ತಿಳಿಸಿದ್ದಾರೆ.

ಜಿ20 ಶೃಂಗಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಗಳಲ್ಲಿ ‘ಪ್ರೆಸಿಡೆಂಟ್ ಆಫ್‌ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಕೇಂದ್ರ ಸರ್ಕಾರವು ನಮೂದಿಸಿತ್ತು. ನಂತರ, ಜಿ20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಎದುರಿನ ನಾಮಫಲಕದಲ್ಲಿ ‘ಇಂಡಿಯಾ’ ಬದಲು ‘ಭಾರತ’ ಎಂದು ಬರೆಯಲಾಗಿತ್ತು.

ಬೇರೆ ಬೇರೆ ಯುದ್ಧಗಳಲ್ಲಿನ ‘ಹಿಂದೂ ವಿಜಯ’ವನ್ನು ಪಠ್ಯಪುಸ್ತಕಗಳಲ್ಲಿ ಪ್ರಮುಖವಾಗಿ ಚಿತ್ರಿಸಬೇಕು ಎಂದು ಎಂದು ಕೂಡ ಸಮಿತಿಯು ಶಿಫಾರಸು ಮಾಡಿದೆ ಎಂದು ಅವರು ತಿಳಿಸಿದ್ದಾರೆ. ‘ಪಠ್ಯಕ್ರಮಗಳಲ್ಲಿ ಈಗ ನಮ್ಮ ವೈಫಲ್ಯಗಳನ್ನು ಉಲ್ಲೇಖಿಸಲಾಗಿದೆ. ಆದರೆ ಮೊಘಲರು ಮತ್ತು ಸುಲ್ತಾನರ ವಿರುದ್ಧ ನಮ್ಮ ವಿಜಯವನ್ನು ಉಲ್ಲೇಖಿಸಿಲ್ಲ’ ಎಂದು ಇಸಾಕ್ ಅವರು ಹೇಳಿದ್ದಾರೆ. ಇಸಾಕ್ ಅವರು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ (ಐಸಿಎಚ್‌ಆರ್‌) ಸದಸ್ಯ ಕೂಡ ಹೌದು.

‘ಬ್ರಿಟಿಷರು ಭಾರತದ ಇತಿಹಾಸವನ್ನು ಪುರಾತನ, ಮಧ್ಯಕಾಲ ಮತ್ತು ಆಧುನಿಕ ಎಂದು ಮೂರು ಭಾಗಗಳನ್ನಾಗಿ ವಿಭಜಿಸಿದ್ದರು. ಭಾರತವು ಅಂಧಕಾರದಲ್ಲಿತ್ತು, ವೈಜ್ಞಾನಿಕ ಪ್ರಗತಿಯ ಬಗ್ಗೆ ಅರಿವಿರಲಿಲ್ಲ, ನಂತರದಲ್ಲಿ ಪ್ರಗತಿ ಸಾಧಿಸಿತು ಎಂದು ಈ ಮೂರು ಭಾಗಗಳಿಗೆ ಸಂಬಂಧಿಸಿದಂತೆ ವಿವರಿಸಲಾಗಿದೆ. ಹೀಗಾಗಿ, ಭಾರತೀಯ ಇತಿಹಾಸದ ಶಾಸ್ತ್ರೀಯ ಕಾಲಘಟ್ಟವನ್ನು ಮಧ್ಯಯುಗ ಹಾಗೂ ಆಧುನಿಕ ಯುಗದ ಜೊತೆಯಲ್ಲಿ ಶಾಲೆಗಳಲ್ಲಿ ಬೋಧಿಸಬೇಕು ಎಂದು ಸಲಹೆ ನೀಡಿದ್ದೇವೆ’ ಎಂದು ಇಸಾಕ್ ವಿವರಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ಕ್ಕೆ ಅನುಗುಣವಾಗಿ ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿದೆ. ಕಲಿಕಾ ಪರಿಕರಗಳು, ಪಠ್ಯಪುಸ್ತಕ ಹಾಗೂ ಪಠ್ಯಕ್ರಮವನ್ನು ಅಂತಿಮಗೊಳಿಸಲು ಮಂಡಳಿಯು 19 ಜನ ಸದಸ್ಯರು ಇರುವ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣ ಕಲಿಕಾ ಪರಿಕರ ಸಮಿತಿಯನ್ನು ಈಚೆಗೆ ರಚಿಸಿದೆ.

ಐಸಿಎಚ್‌ಆರ್‌ ಅಧ್ಯಕ್ಷ ರಘುವೇಂದ್ರ ತನ್ವಾರ್, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ವಂದನಾ ಮಿಶ್ರ, ಡೆಕ್ಕನ್ ಕಾಲೇಜ್ (ಡೀಮ್ಡ್) ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವಸಂತ್ ಶಿಂದೆ, ಹರಿಯಾಣದ ಸರ್ಕಾರಿ ಶಾಲೆಯೊಂದರಲ್ಲಿ ಸಮಾಜಶಾಸ್ತ್ರ ಬೋಧಿಸುವ ಮಮತಾ ಯಾದವ್ ಅವರು ಈ ಸಮಿತಿಯ ಸದಸ್ಯರು.

ಇಸಾಕ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಗುರುತಿಸಿಕೊಂಡಿರುವ ‘ಭಾರತೀಯ ವಿಚಾರ ಕೇಂದ್ರಂ’ನ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 1970ರ ದಶಕದಿಂದಲೂ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜೊತೆ ಇದ್ದಾರೆ. ಅವರು ಪದ್ಮಶ್ರೀ ಪುರಸ್ಕೃತರೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT