ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ | ನಾವು ಯಾವ ಪಕ್ಷದ ಪರವೂ ಅಲ್ಲ: ಧಾರ್ಮಿಕ ಸಂಸ್ಥೆಗಳು

Published 19 ಮೇ 2024, 15:58 IST
Last Updated 19 ಮೇ 2024, 15:58 IST
ಅಕ್ಷರ ಗಾತ್ರ

ಕೋಲ್ಕತ್ತ: ತಾವು ರಾಜಕಾರಣದಿಂದ ದೂರ ಉಳಿದಿದ್ದು, ಯಾವ ಪಕ್ಷದ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ಮಾಡಿಲ್ಲ ಎಂದು ಪಶ್ಚಿಮ ಬಂಗಾಳದ ಎರಡು ಧಾರ್ಮಿಕ ಸಂಸ್ಥೆಗಳು ಭಾನುವಾರ ಸ್ಪಷ್ಟಪಡಿಸಿವೆ. 

‘ಪಶ್ಚಿಮ ಬಂಗಾಳದ ಎರಡು ಪ್ರಮುಖ ಧಾರ್ಮಿಕ ಸಂಸ್ಥೆಗಳು ಬಿಜೆಪಿಯ ಸೂಚನೆಯಂತೆ ಕೆಲಸ ಮಾಡುತ್ತಿವೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದರು. ಅವರ ಆರೋಪವನ್ನು ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘ ನಿರಾಕರಿಸಿದ್ದು, ತಾವು ಸಮಾಜಕ್ಕೆ ಸೇವೆ ಸಲ್ಲಿಸುವುದರತ್ತ ಮಾತ್ರ ಗಮನ ಕೊಡುತ್ತಿರುವುದಾಗಿ ಹೇಳಿವೆ.

‘ಆರೋಪಗಳಿಂದ ನಮಗೆ ನೋವಾಗಿದೆ. ಯಾವುದೇ ವಿವಾದದಲ್ಲಿ ಸಿಲುಕಲು ನಾವು ಇಚ್ಚಿಸುವುದಿಲ್ಲ. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲ ವಲಯಗಳ ಸಾವಿರಾರು ಮಂದಿ ನಮ್ಮ ಆವರಣಕ್ಕೆ ಬಂದು ಧ್ಯಾನ ಮಾಡುತ್ತಾರೆ. ನಮಗೆ ಎಲ್ಲರೂ ಸಮಾನರು’ ಎಂದು ಬೇಲೂರಿನ ರಾಮಕೃಷ್ಣ ಮಿಷನ್ ಕೇಂದ್ರ ಕಚೇರಿಯಲ್ಲಿ ಹಿರಿಯ ಸನ್ಯಾಸಿಯೊಬ್ಬರು ಹೇಳಿದರು.

‘ಚಂಡಮಾರುತಗಳಿಂದ ಕೋವಿಡ್‌ವರೆಗೆ, ದೂರದ ಪ್ರದೇಶಗಳ ನೊಂದವರಿಗೆ ನಾವು ನೆರವು ನೀಡಿದ್ದೇವೆ. ನಮ್ಮದು 107 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯಾಗಿದ್ದು, ದೇಶದಾದ್ಯಂತ ನಮ್ಮ ಸನ್ಯಾಸಿಗಳು ಉಚಿತ ಆರೋಗ್ಯ ಶಿಬಿರಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾರೆ. ನಾವು ಈ ಹಿಂದೆಯೂ ರಾಜಕಾರಣದಲ್ಲಿ ಭಾಗಿಯಾಗಿಲ್ಲ, ಮುಂದೆಯೂ ಭಾಗಿಯಾಗುವುದಿಲ್ಲ’ ಎಂದು ಭಾರತ ಸೇವಾಶ್ರಮ ಸಂಘದ ವಕ್ತಾರರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT