ಅಯೋಧ್ಯೆ: ನೇಪಾಳದ ವಿದೇಶಾಂಗ ಸಚಿವ ನಾರಾಯಣ ಪ್ರಸಾದ್ ಸೌದ್ ಅವರು ಭಾನುವಾರ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ನಾರಾಯಣ ಪ್ರಸಾದ್ ಅವರು ಶನಿವಾರ ಅಯೋಧ್ಯೆಗೆ ತೆರಳಿದ್ದು, ಹನುಮನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಬಳಿಕ ಸಂಜೆ ಸರಯೂ ಆರತಿಯಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ರಾಮ ಮಂದಿರಕ್ಕೆ ತೆರಳಿ ಬಾಲರಾಮನ ದರ್ಶನ ಪಡೆದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪಶುಪತಿನಾಥ್ ಮತ್ತು ಕಾಶಿ ವಿಶ್ವನಾಥನ ನಡುವೆ ಇರುವ ಸಾಂಸ್ಕೃತಿಕ ಸಂಬಂಧದಂತೆ ಜನಕಪುರ– ಅಯೋಧ್ಯೆ ನಡುವೆಯೂ ಬಂಧ ಬೆಸೆದಿದೆ. ಸರ್ಕಾರ ಕೂಡ ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಗಟ್ಟಿಯಾಗುವತ್ತ ಗಮನಹರಿಸುತ್ತಿದೆ. ಶ್ರೀ ರಾಮ, ಜನಕಪುರದಿಂದ ಸೀತಾಮಾತೆಯನ್ನು ವಿವಾಹವಾಗಿದ್ದರು. ಹೀಗಾಗಿ ಉಭಯ ದೇಶಗಳ ನಡುವೆ ಆಳವಾದ ಸಂಬಂಧ ಬೇರೂರಿದೆ’ ಎಂದರು.