ಬೆಂಗಳೂರು: ಜಿ– 20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿಗೆ ಬಂದಿರುವ ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ ಸೋಮವಾರ ಮಧ್ಯಾಹ್ನ ಚರ್ಚ್ ಸ್ಟ್ರೀಟ್ಗೆ ಭೇಟಿನೀಡಿ ಚಹಾ ಸವಿದರು.
ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಚರ್ಚ್ ಸ್ಟ್ರೀಟ್ಗೆ ಆಗಮಿಸಿದ ರುಟ್ಟೆ, ಎಂ.ಜಿ. ರಸ್ತೆ ಮೆಟ್ರೊ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಇರುವ ಚಾಯ್ ಪಾಯಿಂಟ್ನಲ್ಲಿ ಚಹಾ ಖರೀದಿಸಿದರು. ಯುಪಿಐ ಮೂಲಕ ಹಣ ಪಾವತಿಸಿದ ಅವರು, ಅಲ್ಲಿಂದ ಬೇರಿ ವೃತ್ತದತ್ತ ಹೆಜ್ಜೆ ಹಾಕಿದರು.
ಮಾರ್ಕ್ ರುಟ್ಟೆ ಅವರು ಚಾಯ್ ಪಾಯಿಂಟ್ನಿಂದ ಬೇರಿ ವೃತ್ತದವರೆಗೆ ಬೈಸಿಕಲ್ನಲ್ಲಿ ಬರಬೇಕಿತ್ತು. ಆದರೆ, ಸೈಕಲ್ ಬಿಟ್ಟು ನಡಿಗೆಯಲ್ಲೇ ಸಾಗಿದರು. ಅವರೊಂದಿಗೆ ನೆದರ್ಲೆಂಡ್ ಪ್ರಧಾನಿ ಸಚಿವಾಲಯದ ಅಧಿಕಾರಿಗಳು, ಬೆಂಗಳೂರಿನಲ್ಲಿರುವ ನೆದರ್ಲೆಂಡ್ ಕಾನ್ಸುಲ್ ಜನರಲ್ ಮತ್ತು ಅವರ ಕಚೇರಿ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಹೆಜ್ಜೆ ಹಾಕಿದರು.
ಬೇರಿ ವೃತ್ತ ತಲುಪಿದ ಬಳಿಕ ಅಲ್ಲಿ ತಕ್ಷಶಿಲಾ ಇನ್ಸ್ಟಿಟ್ಯೂಷನ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿದರು. ಬೆಂಗಳೂರಿನ ವೈಶಿಷ್ಟ್ಯದ ಕುರಿತೂ ಅಭಿಪ್ರಾಯ ವ್ಯಕ್ತಪಡಿಸಿದರು.