ಕೊಚ್ಚಿ: ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜತೆ ಸಂಪರ್ಕ ಹೊಂದಿದ್ದು ಭಾರತದಲ್ಲಿಉಗ್ರ ಕೃತ್ಯಕ್ಕೆ ಸಂಚು ಹೂಡಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ರಿಯಾಜ್ ಅಬೂಬಕ್ಕರ್ (29) ಎಂಬಾತನನ್ನು ಕಾಸರಗೋಡಿನಲ್ಲಿ ಬಂಧಿಸಿದೆ.
ರಿಯಾಜ್ ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವನಾಗಿದ್ದಾನೆ.ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ರಶೀದ್ ಅಬ್ದುಲ್ಲಾ ಜತೆ ತಾನು ಆನ್ಲೈನ್ ಮೂಲಕ ಸಂಪರ್ಕ ಇಟ್ಟುಕೊಂಡಿರುವುದಾರಿ ರಿಯಾಜ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವಂತೆ ಹೇಳಿರುವಆಡಿಯೊ ತುಣುಕುಗಳನ್ನೂ ರಿಯಾಜ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯ ಬಿಟ್ಟಿದ್ದನು.
ವಳಪಟ್ಟಣಂ ಐಎಸ್ ಪ್ರಕರಣಗಲ್ಲಿ ಆರೋಪಿಯಾಗಿರುವ ಅಬ್ದುಲ್ ಖಯ್ಯಮ್ ಜತೆ ಆನ್ಲೈನ್ ಚಾಟ್ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವ ರಿಯಾಜ್, ಶ್ರೀಲಂಕಾದ ಝೆಹ್ರಾನ್ ಹಾಶಿಂನ ವಿಡಿಯೊ/ಭಾಷಣ, ಜಕೀರ್ ನಾಯಕ್ ಭಾಷಣಗಳನ್ನು ಕೇಳುತ್ತಿದ್ದೆ ಎಂದಿದ್ದಾನೆ.
ಅಷ್ಟೇ ಅಲ್ಲದೆ ಕೇರಳದಲ್ಲಿಯೂ ಆತ್ಮಾಹುತಿ ದಾಳಿ ನಡೆಸಲು ಈತ ಬಯಸಿದ್ದನು ಎಂದು ಒಪ್ಪಿಕೊಂಡಿರುವುದಾಗಿ ಎನ್ಐಎ ಹೇಳಿದೆ.