‘ಸಮಸ್ಯೆ ಇದೆ ಎಂದು ನನಗನ್ನಿಸುವುದಿಲ್ಲ. ಮೋದಿ ಹೆಸರು ಎರಡು ಪಕ್ಷಗಳನ್ನು ಒಗ್ಗೂಡಿಸಿದೆ. ಆದರೆ, ಎರಡೂ ಪಕ್ಷಗಳ ಸಿದ್ಧಾಂತ ಭಿನ್ನವಾಗಿರುವ ಕಾರಣ ತಿಕ್ಕಾಟ ಸಹಜವಾದುದು’ ಎಂದು ಅಣ್ಣಾಮಲೈ ಮಂಗಳವಾರ ಪ್ರತಿಪಾದಿಸಿದರು.
‘ದೆಹಲಿಗೆ ಮೋದಿ, ತಮಿಳುನಾಡಿಗೆ ಎಡಪ್ಪಾಡಿ ಕೆ.ಪಳನಿಸ್ವಾಮಿ’ ಎಂಬ ಎಐಎಡಿಎಂಕೆ ಮುಖಂಡರ ಹೇಳಿಕೆಯನ್ನು ಉಲ್ಲೇಖಿಸಿ, ‘ಅದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಪಡಿಸಿ, ಅಧಿಕಾರಕ್ಕೆ ತರುವ ಗುರಿಯೊಂದಿಗೆ ನಾನು ಬಂದಿದ್ದೇನೆ’ ಎಂದರು.
‘ನಾನು ಹಾಗೇ ಹೇಳುವುದು ಹೇಗೆ ಸಾಧ್ಯ. ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ನಾನು ವೃತ್ತಿನಿರತ ರಾಜಕಾರಣಿಯಲ್ಲ. ನನ್ನನ್ನು ಅಧ್ಯಕ್ಷನಾಗಿ ನೇಮಿಸುವಾಗ ಪಕ್ಷಕ್ಕೂ ಇದು ಗೊತ್ತಿತ್ತು. ಇನ್ನೊಂದು ಪಕ್ಷದ ಪ್ರಚಾರಕ್ಕೆ ನಾನಿಲ್ಲ’ ಎಂದು ಸ್ಪಷ್ಟಪಡಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುವ ಯಾವುದೇ ಪಕ್ಷವು ಬಿಜೆಪಿಯ ಮೈತ್ರಿ ಪಕ್ಷವಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.