ನವದೆಹಲಿ: 'ತಾನು ಕಾಂಗ್ರೆಸ್ ಜೊತೆಗೆ ಇಲ್ಲ' ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಒತ್ತಿ ಹೇಳಿದರು. 'ನಾನು ಕಾಂಗ್ರೆಸ್ನಲ್ಲಿ ಉಳಿಯುತ್ತಿಲ್ಲ ಹಾಗೇ ಬಿಜೆಪಿಗೂ ಸೇರುತ್ತಿಲ್ಲ' ಎಂದು ಗುರುವಾರ ಸ್ಪಷ್ಟಪಡಿಸಿದರು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜ್ಯಕ್ಕೆ ತಕ್ಕನಾದ ವ್ಯಕ್ತಿಯಲ್ಲ ಎಂದಿರುವ ಅಮರಿಂದರ್ ಸಿಂಗ್, 'ಆತನನ್ನು ಎಲ್ಲಿಂದಲೂ ಗೆಲ್ಲಲು ಬಿಡುವುದಿಲ್ಲ' ಎಂದಿದ್ದಾರೆ.
ತಮ್ಮ ಮುಂದಿನ ನಡೆಯ ಬಗ್ಗೆ ನಂತರದಲ್ಲಿ ತಿಳಿಸುವುದಾಗಿ ಹೇಳಿದರು.
#WATCH | "...I had said it before also that Navjot Singh Sidhu is not the right man for Punjab, and if he contests, I will not let him win...," says former Punjab CM Captain Amarinder Singh pic.twitter.com/msURZAlalR
ಪಂಜಾಬ್ನ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಪಂಜಾಬ್ ಕಾಂಗ್ರೆಸ್ ಸರ್ಕಾರವು ಬಹುಮತ ಕಳೆದುಕೊಂಡರೆ, ವಿಧಾನಸಭೆಯ ಸ್ಪೀಕರ್ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿಯಾದ ಅಮರಿಂದರ್ ಅವರು ಭದ್ರತೆಗೆ ಸಂಬಂಧಿತ ವಿಚಾರಗಳನ್ನು ಚರ್ಚಿಸಿದ್ದು, ಅವುಗಳನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಬೆಳವಣಿಗೆಗಳ ನಡುವೆ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರೊಂದಿಗೆ ಚಂಡೀಗಡದ ಪಂಜಾಬ್ ಭವನದಲ್ಲಿ ಮಾತುಕತೆ ನಡೆಸಿದ್ದಾರೆ.