ಮುಂಬೈ: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ನಟಿ ಕಂಗನಾ ರನೌತ್ ವಿರುದ್ಧದ ಹಕ್ಕುಚ್ಯುತಿ ನೋಟಿಸ್ಗೆ ಸಂಬಂಧಿಸಿದಂತೆ ಹಕ್ಕುಬಾಧ್ಯತಾ ಸಮಿತಿಗೆ ವರದಿ ಸಲ್ಲಿಸಲು ನೀಡಿದ್ದ ಅವಧಿಯನ್ನು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ವಿಸ್ತರಿಸಿದೆ.
ವಿಧಾನಸಭೆಯ ಮುಂದಿನ ಅಧಿವೇಶನದ ಕೊನೆಯ ದಿನದ ವರೆಗೆ ಈ ಅವಧಿಯನ್ನು ವಿಸ್ತರಿಸಲಾಗಿದೆ.
ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ ಅವರು ಗೋಸ್ವಾಮಿ ಹಾಗೂ ಕಂಗನಾ ವಿರುದ್ಧದ ಹಕ್ಕುಚ್ಯುತಿ ನೋಟಿಸ್ಗಳನ್ನು ವಿಧಾನಸಭೆ ಸ್ಪೀಕರ್ ಕಚೇರಿಗೆ ಸೆ.7ರಂದು ಸಲ್ಲಿಸಿದ್ದರು.
ನಟಿ ಕಂಗನಾ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದರು. ಈ ಕಾರಣಕ್ಕಾಗಿ ಶಾಸಕ ಸರ್ನಾಯಕ ಹಾಗೂ ಕಂಗನಾ ಪರಸ್ಪರರ ವಿರುದ್ಧ ಟೀಕೆಗಳನ್ನು ಮಾಡಿದ್ದರು.
2018ರಲ್ಲಿ ವ್ಯಕ್ತಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಗೋಸ್ವಾಮಿ ವಿರುದ್ಧ ಆರೋಪ ಇತ್ತು. ಈ ಪ್ರಕರಣ ಕುರಿತಂತೆ ಮರು ತನಿಖೆ ನಡೆಸುವಂತೆ ಸರ್ನಾಯಕ ಒತ್ತಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಗೋಸ್ವಾಮಿ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.