ನವದೆಹಲಿ: ದೆಹಲಿಯ ಮಾಲಿನ್ಯ ಮಟ್ಟ ಹೆಚ್ಚಾಗಿದ್ದು, ನವೆಂಬರ್ 13ರಿಂದ 20ರವರೆಗೆ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಂಡಿರುವುದಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಸೋಮವಾರ ತಿಳಿಸಿದ್ದಾರೆ.
‘ದೀಪಾವಳಿ ಸಂದರ್ಭವಾಗಿರುವುದರಿಂದ ನ. 13ರಿಂದ 20ರವರೆಗೆ ಕಾರುಗಳ ನೋಂದಣಿ ಸಂಖ್ಯೆಯಲ್ಲಿ ಬೆಸ ಸಂಖ್ಯೆಯ ವಾಹನ ಒಂದು ದಿನವಾದರೆ, ಸರಿ ಸಂಖ್ಯೆಯ ವಾಹನ ಒಂದು ದಿನ ರಸ್ತೆಗಳಿಯುವಂತಿಲ್ಲ. ನ. 20ರ ನಂತರವೂ ಈ ವ್ಯವಸ್ಥೆ ಮುಂದುವರಿಯಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದರಿಂದ ಶಾಲ ಮಕ್ಕಳ ಸುರಕ್ಷತೆಗಾಗಿ ಮತ್ತು 10 ಹಾಗೂ 12ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಶಾಲೆ ಖುದ್ದು ಹಾಜರಿಗೆ ವಿನಾಯಿತಿ ನೀಡಲಾಗಿದೆ ಎಂದು ರೈ ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಾಲಿನ್ಯ ಪ್ರಮಾಣಕ್ಕಿಂತ 7ರಿಂದ 8 ಪಟ್ಟು ಮಾಲಿನ್ಯ ಸೋಮವಾರ ಹೆಚ್ಚಾಗಿತ್ತು. ಸತತ ಏಳನೇ ದಿನ ದಟ್ಟ ಹೊಗೆ ತುಂಬಿದ ವಾಯು ಮಾಲಿನ್ಯ ಏರುಗತಿಯಲ್ಲೇ ಸಾಗಿದೆ. ಗಾಳಿಯ ಗುಣಮಟ್ಟ ಕಳೆದ 24 ಗಂಟೆಗಳಲ್ಲಿ 454ಕ್ಕೆ ಏರಿಕೆಯಾಗಿದೆ. ಶನಿವಾರ ಇದು 415 ಇತ್ತು. ಇದರಿಂದಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್ಎಪಿ) ಅಡಿಯಲ್ಲಿ ನಾಲ್ಕನೇ ಹಂತದ ಕ್ರಮವನ್ನು ದೆಹಲಿ ಸರ್ಕಾರ ತೆಗೆದುಕೊಂಡಿದೆ ಎಂದೆನ್ನಲಾಗಿದೆ.
ದೆಹಲಿಯ ಮಾಲಿನ್ಯಕ್ಕೆ ವಾಹನಗಳ ಕೊಡುಗೆ ಪ್ರಮಾಣ ಶೇ 40ರಷ್ಟಿದೆ. ಇದು ಪಿಎಂ 2.5ರಷ್ಟು ದೂಳಿನ ಕಣವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತಿದೆ ಎಂದು ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯು 2018ರಲ್ಲಿ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.