ಬರ್ಹಾಂಪುರ (ಒಡಿಶಾ): ವಿಷಪೂರಿತ ಹಾವನ್ನು ಕೊಠಡಿಗೆ ಬಿಡುವ ಮೂಲಕ ತನ್ನ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಹಾಂಪುರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಅಧೇಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಬಸಂತಿ ಪಾತ್ರಾ (23) ಜತೆ ವೈವಾಹಿಕ ಕಲಹವಿತ್ತು ಎಂದು ತಿಳಿದುಬಂದಿದೆ. 2020ರಲ್ಲಿ ವಿವಾಹವಾಗಿದ್ದ ದಂಪತಿಗೆ ದೇಬಾಸ್ಮಿತಾ ಎಂಬ ಎರಡು ವರ್ಷದ ಮಗಳಿದ್ದಳು.
ಧಾರ್ಮಿಕ ಉದ್ದೇಶಗಳಿಗೆ ಹಾವನ್ನು ಬಳಸುವುದಾಗಿ ಹೇಳಿ ಹಾವು ಹಿಡಿಯುವವರಿಂದ ಗಣೇಶ್ ವಿಷಪೂರಿತ ಹಾವನ್ನು ಪಡೆದಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 6ರಂದು ಪ್ಲಾಸ್ಟಿಕ್ ಜಾರ್ನಲ್ಲಿ ನಾಗರ ಹಾವನ್ನು ತಂದು ಪತ್ನಿ ಮತ್ತು ಮಗಳು ಮಲಗಿದ್ದ ಕೋಣೆಗೆ ಬಿಟ್ಟಿದ್ದ. ಮರುದಿನ ಬೆಳಗ್ಗೆ ಇಬ್ಬರೂ ಹಾವು ಕಡಿತದಿಂದ ಮೃತಪಟ್ಟಿದ್ದರು. ಆರೋಪಿ ಮತ್ತೊಂದು ಕೋಣೆಯಲ್ಲಿ ಮಲಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಆರೋಪಿಯ ತಂದೆ ಪ್ರಕರಣ ದಾಖಲಿಸಿದ ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಯಿತು ಎಂದು ಗಂಜಾಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ತಿಳಿಸಿದ್ದಾರೆ.
ಘಟನೆ ನಡೆದು ಒಂದು ತಿಂಗಳ ನಂತರ ಆರೋಪಿಯನ್ನು ಬಂಧಿಸಲಾಗಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸ್ವಲ್ಪ ವಿಳಂಬವಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.