ತಿರುಚಿರಾಪಳ್ಳಿ: ತಮಿಳುನಾಡಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದ್ದು, ಹಾನಿಗೆ ಪರಿಹಾರ ರೂಪದಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮನವಿ ಸಲ್ಲಿಸಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ತಮಿಳುನಾಡಿಗೆ ಮಂಗಳವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಟಾಲಿನ್ ಮನವಿ ಸಲ್ಲಿಸಿದರು.
‘ಚೆನ್ನೈ ಹಾಗೂ ರಾಜ್ಯದ ದಕ್ಷಿಣದ ಭಾಗದಲ್ಲಿ ಸುರಿದ ಭಾರೀ ಮಳೆ ಸೃಷ್ಟಿಸಿದ ಸಮಸ್ಯೆಯ ಮಾಹಿತಿ ನಿಮಗೆ ಗೊತ್ತೇ ಇದೆ. ಈ ಭಾಗದಲ್ಲಿನ ಮೂಲಸೌಕರ್ಯ ಸಂಪೂರ್ಣ ಹಾಳಾಗಿದೆ. ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇವೆಲ್ಲವನ್ನೂ ಸರಿಪಡಿಸಲು ಅಗತ್ಯ ಅನುದಾನ ಬೇಕಾಗಿದ್ದು, ಕೇಂದ್ರವು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಕೋರಿದ್ದಾರೆ.
‘ಇದರೊಂದಿಗೆ ತಮಿಳುನಾಡು ಮಳೆ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಪ್ರಧಾನಿಗೆ ಸ್ಟಾಲಿನ್ ಮನವಿ ಮಾಡಿದ್ದಾರೆ’ ಎಂದು ವರದಿಯಾಗಿದೆ.