ನವದೆಹಲಿ: ವನವಾಸದ ನಂತರ ತಮಿಳುನಾಡಿನ ರಾಮೇಶ್ವರಂನಿಂದ ಅಯೋಧ್ಯೆಯ ತನ್ನ ರಾಜ್ಯಕ್ಕೆ ಮರಳಲು ಭಗವಾನ್ ರಾಮನು ಅನುಸರಿಸಿದ ಮಾರ್ಗವನ್ನು ಪತ್ತೆಹಚ್ಚಲು 500ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಇನ್ಫ್ಲುಯನ್ಸರ್ಗಳು ಒಂದು ತಿಂಗಳ ಅವಧಿಯ 4,500 ಕಿಮೀ ಯಾತ್ರೆಯನ್ನು ಕೈಗೊಳ್ಳಲು ಸಜ್ಜಾಗಿದ್ದಾರೆ.
ರಾಮೋತ್ಸವ ಯಾತ್ರೆಯ ಆಯೋಜಕರ ಪ್ರಕಾರ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ.
ರಾಮೋತ್ಸವ ಯಾತ್ರಾ ತಂಡದ ಭಾಗವಾಗಿರುವ ಅಪೂರ್ವ ಸಿಂಗ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನವರಿ 14ರಂದು ಒಂದು ತಿಂಗಳ ಯಾತ್ರೆ ಪ್ರಾರಂಭವಾಗಲಿದೆ.
‘500ಕ್ಕೂ ಹೆಚ್ಚು ಇನ್ಸ್ಟಾಗ್ರಾಮರ್ಗಳು, ಯೂಟ್ಯೂಬರ್ಗಳು, ಬ್ಲಾಗರ್ಗಳು, ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಂಘಟನಾ ತಂಡದ ಇನ್ನೊಬ್ಬ ಪ್ರಮುಖ ಸದಸ್ಯ ಮಲಯ್ ದೀಕ್ಷಿತ್ ಪಿಟಿಐಗೆ ತಿಳಿಸಿದ್ದಾರೆ.
ಆಲ್ ಇಂಡಿಯಾ ಇನ್ಫ್ಲುಯನ್ಸರ್ಸ್ ಅಸೋಸಿಯೇಶನ್ ರಚಿಸಿರುವ ರಾಮೋತ್ಸವ ಯಾತ್ರಾ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು.
‘ನಮ್ಮ ಈ ಪ್ರಯಾಣವು ಕೇವಲ ನೀತಿಬೋಧಕವಲ್ಲ, ಆದರೆ, ಅರಣ್ಯಗಳ ಮೂಲಕ ಭಗವಾನ್ ಶ್ರೀರಾಮನ ಪ್ರಯಾಣದ ಆಚರಣೆಯಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ನಮಗೆ ಪರಿಚಯಿಸುತ್ತದೆ‘ ಎಂದು ದೀಕ್ಷಿತ್ ಹೇಳಿದರು.
‘ಯಾತ್ರೆಯ ಸಮಯದಲ್ಲಿ ಭಗವಾನ್ ಶ್ರೀರಾಮನ ನಿಜವಾದ ಅರಣ್ಯ ಪ್ರಯಾಣವನ್ನು ಅನುಕರಿಸಲು ಮತ್ತು ಅದನ್ನು ದಾಖಲಿಸಲು ನಮಗೆ ಅವಕಾಶ ಸಿಗುತ್ತದೆ’ಎಂದು ಅವರು ಹೇಳಿದರು.
ಅಯೋಧ್ಯೆಗೆ ಹೋಗುವ ದಾರಿಯ ಪ್ರಮುಖ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿ ಅಯೋಧ್ಯೆಯಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಅವಕ್ಕೆ 'ರಾಮಾಯಾನ' ಎಂದು ಹೆಸರಿಡಲಾಗುತ್ತದೆ ಎಂದರು.
ಯಾತ್ರಾರ್ಥಿಗಳು ಯಾತ್ರೆಯ ಸಮಯದಲ್ಲಿ, ರಾಮೇಶ್ವರಂ, ತ್ರಯಂಬಕೇಶ್ವರ, ಗ್ರಿಷ್ಣೇಶ್ವರ ಮತ್ತು ಕಾಶಿ ವಿಶ್ವನಾಥ ಸೇರಿ 4 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲಿದ್ದಾರೆ.