ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಉದ್ಘಾಟಿಸಿದ ನವೀಕೃತ ಕಾಶಿ ವಿಶ್ವನಾಥ ಧಾಮಕ್ಕೆ ವರ್ಷದ ಮೊದಲ ದಿನವಾದ ಶನಿವಾರ ಸುಮಾರು 5 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ವಾರಾಣಸಿಯಲ್ಲಿನ ಶಿವನ ದೇವಸ್ಥಾನಕ್ಕೆ ಮಹಾಶಿವರಾತ್ರಿ ದಿನ ಭೇಟಿ ನೀಡುವುದು ಒಳ್ಳೆಯದು ಎಂದು ಭಕ್ತರು ಭಾವಿಸಿದ್ದಾರೆ. ಆದರೆ, ಇದುವರೆಗೂ ಆ ದಿನ ಭಕ್ತರ ಸಂಖ್ಯೆ 2.5 ಲಕ್ಷ ದಾಟಿಲ್ಲ ಎಂದೂ ತಿಳಿಸಿವೆ.
‘ಜನವರಿ 1 ರಂದು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 5 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿರುವುದು ಸ್ಥಳೀಯ ಆಡಳಿತಕ್ಕೆ ಅಚ್ಚರಿ ಮೂಡಿಸಿದೆ. ಭಕ್ತರ ಸಂಖ್ಯೆ 1 ಲಕ್ಷ ದಾಟಲಾರದು ಎಂದು ಭಾವಿಸಿದ್ದ ಆಡಳಿತಾಧಿಕಾರಿಗಳಿಗೆ ಸಾಗರೋಪಾದಿಯಲ್ಲಿ ಭಕ್ತರು ಬಂದಿದ್ದು ಅಚ್ಚರಿ ಮೂಡಿಸಿದೆ’ ಎಂದು ಮೂಲವೊಂದು ಹೇಳಿದೆ.
ಐದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಕಾಶಿ ವಿಶ್ವನಾಥ ಧಾಮ ಸಂಕೀರ್ಣದ ಮೊದಲ ಹಂತವನ್ನು ಪ್ರಧಾನಿ ಮೋದಿ ಕಳೆದ ತಿಂಗಳು ಉದ್ಘಾಟಿಸಿದ್ದರು.