ನವದೆಹಲಿ: ಡ್ರಗ್ಸ್ ಮಾಫಿಯಾದ ಮೂಲಕ ಭಾರತೀಯ ಯುವಕರನ್ನು ಹಾಳು ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.
ಎಚ್ಟಿ ನಾಯಕತ್ವ ಶೃಂಗಸಭೆಯಲ್ಲಿ ಭಾಗವಹಿಸಿ ಅವರು ಮಾತಮಾಡಿದರು. ಪಂಜಾಬ್ ಸೇರಿದಂತೆ ಭಾರತದ ಗಡಿ ರಾಜ್ಯಗಳಲ್ಲಿ ಪಾಕಿಸ್ತಾನ ಅಕ್ರಮವಾಗಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದು ಭಾರತೀಯ ಯುವಕರನ್ನು ನಾಶಪಡಿಸುವ ಪಾಕಿಸ್ತಾನದ ದೀರ್ಘಕಾಲಿನ ಯೋಜನೆ ಇದಾಗಿದೆ. ಇತ್ತೀಚೆಗೆ ಗುಜರಾತ್ನ ಮಾಂಡ್ವಿ ಮತ್ತು ಕಾಶ್ಮೀರದ ಉರಿಯಲ್ಲಿ ನೂರಾರು ಕೆ.ಜೆ. ಹೆರಾಯಿನ್ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ ಎಂದು ಅಮರಿಂದರ್ ಆರೋಪಿಸಿದರು.
ಡ್ರಗ್ಸ್ ಮಾಫಿಯಾದಿಂದ ಪಂಜಾಬ್ ಕ್ಲಿಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ, ಆದಾಗ್ಯೂ ಸರ್ಕಾರ ದಿಟ್ಟತನದಿಂದ ಈ ಸಮಸ್ಯೆಯ ವಿರುದ್ಧ ಹೋರಾಡುತ್ತಿದೆ. ಮಾರುಕಟ್ಟೆಯಲ್ಲಿ ಯುವಕರಿಗೆ ಡ್ರಗ್ಸ್ ದೊರೆಯದಂತೆ ಸಾಕಷ್ಟು ಪ್ರಯ್ನಗಳನ್ನು ಮಾಡಲಾಗುತ್ತಿದೆ ಎಂದು ಅಮರಿಂದರ್ ಹೇಳಿದರು.
ಡ್ರಗ್ಸ್ ಮಾಫಿಯಾದ ಹಿಂದೆ ಪಾಕಿಸ್ತಾನದ ಕೈವಾಡ ಇರುವುದನ್ನುಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಪತ್ತೆ ಮಾಡಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು.