ಚಂಡೀಗಢ: ನೂಹ್ನಲ್ಲಿ ಕಳೆದ ತಿಂಗಳು ನಡೆದಿದ್ದ ಹಿಂಸಾಚಾರದಲ್ಲಿ ಕಾಂಗ್ರೆಸ್ನ ಕೈವಾಡವಿರಬಹುದು ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮಂಗಳವಾರ ಹೇಳಿದ್ದಾರೆ.
ಜತೆಗೆ, ಪಾಕಿಸ್ತಾನದ ಸಂಚು ಇರಬಹುದಾ ಎಂಬ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರು ಕೇಂದ್ರ ತನಿಖಾ ತಂಡಗಳ ನೆರವು ಪಡೆಯಲಿದ್ದಾರೆ ಎಂದು ಅವರು ವಿಧಾನಸಭೆಯ ಹೊರಗೆ ಹೇಳಿದರು.
ನೂಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ಗೆ ಹರಿಯಾಣ ಪೊಲೀಸರು ನೋಟಿಸ್ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
ಸೈಬರ್ ಪೊಲೀಸ್ ಠಾಣೆಯ ಮೇಲಿನ ದಾಳಿಯಂಥ ಘಟನೆಗಳನ್ನು ಪರಿಶೀಲಿಸಲಾಗುತ್ತಿದೆ. ಪಾಕಿಸ್ತಾನದಿಂದ ಅನೇಕ ವಿಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.
ಘರ್ಷಣೆಗೆ ಸಂಬಂಧಿಸಿದಂತೆ ಈ ವರೆಗೆ 510 ಮಂದಿಯನ್ನು ಬಂಧಿಸಲಾಗಿದ್ದು, 130 ಎಫ್ಐಆರ್ ದಾಖಲಿಸಲಾಗಿದೆ ಎಂದು ವಿಜ್ ಹೇಳಿದ್ದಾರೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ)ನ ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ಮಾಡಿತ್ತು. ನಂತರ ನೂಹ್ ಮತ್ತು ಸುತ್ತಲ ಪ್ರದೇಶಗಳಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದಿದ್ದವು. ಇಬ್ಬರು ಗೃಹರಕ್ಷಕರು ಮತ್ತು ಧರ್ಮಗುರು ಸೇರಿದಂತೆ ಆರು ಜನ ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.