ನವದೆಹಲಿ: ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲು 2016ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಎತ್ತಿ ಹಿಡಿದಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಭಾನುವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಜನವರಿ 2ರಂದು ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠವು 4–1ರ ಬಹುಮತದ ತೀರ್ಪು ನೀಡಿ, ‘ಸರ್ಕಾರದ ನಿರ್ಧಾರವು ದೋಷಪೂರಿತವಾಗಿಲ್ಲ ಮತ್ತು ಅದು ಆತುರದಿಂದ ತೆಗೆದುಕೊಂಡ ನಿರ್ಧಾರವಲ್ಲ’ ಎಂದಿತ್ತು.
ನೋಟು ರದ್ದತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ 58 ದೂರುದಾರರ ಪೈಕಿ ಒಬ್ಬರಾದ ವಕೀಲ ಎಂ.ಎಲ್. ಶರ್ಮಾ ಅವರು ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
‘ಪೀಠವು ತನ್ನ ತೀರ್ಪಿನಲ್ಲಿ ‘ಲಿಖಿತ ವಾದಗಳನ್ನು’ ಪರಿಗಣಿಸಿಲ್ಲ. ಇದು ಗಂಭೀರ ಅನ್ಯಾಯ’ ಎಂದು ಶರ್ಮಾ ಅವರು ಅರ್ಜಿಯಲ್ಲಿ ಹೇಳಿದ್ದಾರೆ.