ನವದೆಹಲಿ: ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮಾದರಿಯು ವಿಶ್ವ ಕಲ್ಯಾಣಕ್ಕೆ ಮಾರ್ಗದರ್ಶಿತತ್ವವಾಗಬಲ್ಲದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಅವರು ಈ ‘ಮಾದರಿ’ ಕುರಿತು ಪ್ರಸ್ತಾಪಿಸಿದ್ದರು.
‘ಈ ಹಿಂದಿನ 67 ವರ್ಷಗಳಿಗೆ ಹೋಲಿಸಿದಾಗ, ದೇಶದಲ್ಲಿ ಕಳೆದ 9 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಬಹುದು’ ಎಂದು ಬಿಜೆಪಿ ಮುಖಂಡ ಅನಿಲ್ ಆಂಟನಿ ಹೇಳಿದ್ದಾರೆ.
‘ಇಂಡಿಯಾ’ ಗುಂಪಿನ ನಾಯಕರು ಪ್ರಧಾನಿಯನ್ನು ಟೀಕಿಸಿದ್ದಾರೆ. ‘ಜಿ–20 ಶೃಂಗಕ್ಕಾಗಿ ರಸ್ತೆಗಳನ್ನು ಅಂದಗೊಳಿಸಲಾಗುತ್ತಿದೆ. ಆದರೆ, ದೇಶದ ಯುವಕರು ಉದ್ಯೋಗ ಕೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಟೀಕಿಸಿದ್ದಾರೆ.
‘ಕಳೆದ 42 ವರ್ಷಗಳಲ್ಲೇ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಇಂಧನ, ಔಷಧಗಳ ಬೆಲೆಗಳು ಕೈಗೆಟುಕಲಾರದಷ್ಟು ಹೆಚ್ಚಿವೆ’ ಎಂದು ಎಎಪಿ ಸಂಸದ ಸಂಜಯಸಿಂಗ್ ಟೀಕಿಸಿದ್ದಾರೆ. ಆರ್ಜೆಡಿ ಸಂಸದ ಮನೋಜ್ ಝಾ ಅವರೂ ಮೋದಿ ಹೇಳಿಕೆಗಳನ್ನು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.