ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಬೆಳವಣಿಗೆ ಆರ್‌ಬಿಐನ ಆದ್ಯತೆ ಆಗಬೇಕು: ನರೇಂದ್ರ ಮೋದಿ

ಆರ್‌ಬಿಐನ 90ನೇ ವಾರ್ಷಿಕೋತ್ಸವದಲ್ಲಿ ಮೋದಿ ಆಶಯ
Published 1 ಏಪ್ರಿಲ್ 2024, 16:13 IST
Last Updated 1 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಮುಂಬೈ: ‘ದೇಶದ ಬೆಳವಣಿಗೆ’ಯು ಮುಂದಿನ ದಶಕದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮೊದಲ ಆದ್ಯತೆ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಹೇಳಿದರು.

ಆರ್‌ಬಿಐ 90 ವರ್ಷಗಳನ್ನು ಪೂರೈಸಿದ್ದರ ಸ್ಮರಣಾರ್ಥವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇನ್ನು 10 ವರ್ಷಗಳಲ್ಲಿ ಆರ್‌ಬಿಐ ಶತಮಾನೋತ್ಸವ ಆಚರಿಸಲಿದೆ. ಈ ವೇಳೆ ಅದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿಯೆಡೆಗೆ ಕೆಲಸ ಮಾಡಬೇಕು. ಜೊತೆಗೆ, ವಿಶ್ವಾಸ ಹಾಗೂ ಸ್ಥಿರತೆ ಕಾಯ್ದುಕೊಳ್ಳುವ ಕಡೆಗೂ ಮಹತ್ವ ನೀಡಬೇಕು’ ಎಂದರು.

2016ರಿಂದ ಈಚೆಗೆ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಆರ್‌ಬಿಐನ ಪ್ರಮುಖ ಗುರಿಯಾಗಿದೆ. ದರ ಕಡಿತದಂಥ ಕ್ರಮಗಳ ಮೂಲಕ ಬೆಳವಣಿಗೆ ಕಡೆಗೆ ಹೆಚ್ಚಿನ ಗಮನ ನೀಡುವಂಥ ಸಲಹೆಗಳೂ ಆಗಾಗ ಬಂದಿವೆ ಎಂದು ಅವರು ಹೇಳಿದರು.

ಹೊಸ ಆರ್ಥಿಕ ವರ್ಷದ ಪ್ರಥಮ ಹಣಕಾಸು ನೀತಿ ಪರಿಶೀಲನೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಮೋದಿ ಅವರು ಈ ಮಾತುಗಳನ್ನಾಡಿದ್ದಾರೆ.

ಈ ಮೊದಲು ಆರ್ಥಿಕ ನೀತಿಗಳಲ್ಲಿ ಎರಡಂಕಿ ಹಣದುಬ್ಬರ ದರ ಪ್ರತಿಬಿಂಬಿತವಾಗುತ್ತಿರಲಿಲ್ಲ. ಹಣದುಬ್ಬರವನ್ನು ನಿಗ್ರಹಿಸಿದ ಹೆಗ್ಗಳಿಕೆಯನ್ನು ಆರ್‌ಬಿಐಗೇ ನೀಡಬೇಕು. ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ವರ್ಷದಿಂದ ವರ್ಷಕ್ಕೆ ತನ್ನ //ಆಧ್ಯಾದೇಶಕ್ಕೆ/// ಸಂಬಂಧಿಸಿದಂತೆ ಗುರುತರ ಕೆಲಸ ಮಾಡಿದೆ. ಹಣಕಾಸು ಕ್ರೋಡೀಕರಣ ಮತ್ತು ಕ್ರಿಯಾತ್ಮಕ ದರ ಪರಿವೀಕ್ಷಣೆಯಂಥ ಕ್ರಮ ತೆಗೆದುಕೊಳ್ಳುವುದೂ ಸೇರಿದಂತೆ ಸರ್ಕಾರ ಕೈಗೊಂಡ ಪ್ರಯತ್ನಗಳು ಹಣದುಬ್ಬರ ತಗ್ಗಲು ಸಹಾಯವಾಯಿತು  ಎಂದು ಅವರು ಅಭಿಪ್ರಾಯಪಟ್ಟರು. 

ಕೋವಿಡ್‌–19 ಅಂತಹ ಸಾಂಕ್ರಾಮಿಕ ಮತ್ತು ಹಲವು ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳು ಸವಾಲುಗಳನ್ನು ಒಡ್ಡಿದರೂ ದೇಶದಲ್ಲಿ ಹಣದುಬ್ಬರವು ಮಂದಗಾಮಿಯಾಗಿಯೇ ಇದೆ. ಕೋವಿಡ್‌ ಹೊಡೆತದಿಂದ ಸುಧಾರಿಸಿಕೊಳ್ಳಲು ಹಲವು ದೇಶಗಳು ಪ್ರಾಯಾಸಪಡುತ್ತಿರುವ ನಡುವೆಯೇ ಭಾರತ ಆರ್ಥಿಕತೆಯು ಹೊಸ ದಾಖಲೆಗಳನ್ನು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT