ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷ ಭಾಷಣ | ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ: ವಿರೋಧ ಪಕ್ಷಗಳು

Published 20 ಮೇ 2024, 15:41 IST
Last Updated 20 ಮೇ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ಅವರ ‘ಅಲ್ಪಸಂಖ್ಯಾತರ ವಿರುದ್ಧ ನಾನು ಒಂದೂ ಮಾತು ಆಡಿಲ್ಲ’ ಎಂಬ ಹೇಳಿಕೆಗೆ ತಿರುಗಿ ಬಿದ್ದಿರುವ ವಿರೋಧ ಪಕ್ಷಗಳ ಮುಖಂಡರು, ಪ್ರತಿಯೊಂದು ವೇದಿಕೆಯಲ್ಲೂ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಮೋದಿ ಅವರು ಹೇಳುತ್ತಿರುವುದು ‘ಸುಳ್ಳು’ ಎಂದು ಟೀಕಿಸಿದ್ದಾರೆ. 

‘ಪ್ರಧಾನಿ ಹೇಳಿಕೆ ಸಂಪೂರ್ಣ ಸುಳ್ಳು. ಅವರು (ಬಿಜೆಪಿಯವರು) ಮುಸ್ಲಿಮರ ವಿರುದ್ಧ ಹೇಗೆ ಮಾತನಾಡುತ್ತಿದ್ದಾರೆ ಎಂಬುದು ಮೋದಿ ಅವರಿಗೆ ತಿಳಿದಿದೆ. ಮಂಗಳಸೂತ್ರ ಮತ್ತು ಹೆಚ್ಚು ಮಕ್ಕಳನ್ನು ಹೊಂದಿದವರು.. ಮುಂತಾದ ಹೇಳಿಕೆಗಳನ್ನು ಕೊಟ್ಟವರು ಯಾರು? ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು ತಮಗೆ ಸಿಗಬೇಕಾದ ಹಲವು ಹಕ್ಕುಗಳಿಂದ ವಂಚಿತರಾಗಿದ್ದಾರೆ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ-ಆರ್‌ಎಸ್‌ಎಸ್‌ನವರು ಅಲ್ಪಸಂಖ್ಯಾತರನ್ನು ದುರ್ಬಲಗೊಳಿಸುವ ಮತ್ತು ಅವರನ್ನು ಅಪಹಾಸ್ಯಕ್ಕೆ ಗುರಿಪಡಿಸುವ ‘ದುಷ್ಟ ಯೋಜನೆ’ಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದ್ದಾರೆ. 

‘ಪ್ರಧಾನಿ ಅವರು ಹಿಂದೂ–ಮುಸ್ಲಿಮರ ಮಧ್ಯೆ ಮಾತ್ರವಲ್ಲ, ಹಿಂದೂಗಳು ಪರಸ್ಪರ ಕಚ್ಚಾಡುವಂತೆ ಮಾಡುತ್ತಿದ್ದಾರೆ. ಮೊದಲು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಾರೆ. ಆ ಬಳಿಕ ಹಿಂದೂಗಳು ಸಿಖ್, ಕ್ರೈಸ್ತ ಮತ್ತು ಬೌದ್ಧರ ವಿರುದ್ದ ಜಗಳವಾಡುವಂತೆ ಮಾಡುವರು. ಅದೇ ರೀತಿ ಮರಾಠರು ಮರಾಠಯೇತರರ ವಿರುದ್ಧ, ದಲಿತರು ಇತರ ಹಿಂದುಳಿದ ವರ್ಗದವರ ವಿರುದ್ಧ ಕಚ್ಚಾಡುವ ಹಾಗೆ ಮಾಡುವರು’ ಎಂದು ಎಎಪಿ ಸಂಸದ ಸಂಜಯ್‌ ಸಿಂಗ್‌ ದೂರಿದ್ದಾರೆ. 

ಬಿಜೆಪಿ ಸಮರ್ಥನೆ: ಪ್ರಧಾನಿ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ‘ಮೋದಿ ಅವರು ಸತ್ಯವನ್ನೇ ಹೇಳಿದ್ದಾರೆ. ಅವರ ಎಲ್ಲ ನೀತಿಗಳು ಬಡವರ ಪರವಾಗಿದ್ದು, ಎಲ್ಲರಿಗೂ ಪ್ರಯೋಜನ ನೀಡಿವೆ’ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಪ್ರತಿಕ್ರಿಯಿಸಿದ್ದಾರೆ.

ಮೋದಿ ಅವರ ಸುಳ್ಳುಗಳು ಬೇಗನೇ ಬಯಲಾಗುತ್ತವೆ. ಅವರು ಏನೇ ಹೇಳಿದರೂ ಅವರದ್ದೇ ಸರ್ಕಾರ ಅದನ್ನು ಸುಳ್ಳಾಗಿಸುವಂಥ ಕೆಲಸ ಮಾಡುತ್ತದೆ. ಆದ್ದರಿಂದ ಜನರು ಅವರನ್ನು ನಂಬುವುದಿಲ್ಲ 
- ಟಿ.ಕೆ.ಎಸ್‌.ಇಳಂಗೋವನ್ ಡಿಎಂಕೆ ವಕ್ತಾರ
ಪ್ರಧಾನಿ ಅವರು ‘ವಿಕಸಿತ ಭಾರತ’ಕ್ಕೆ ನೆರವಾಗುವ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಯಾವುದೇ ಮಾತುಗಳನ್ನಾಡುತ್ತಿಲ್ಲ. ಮಂಗಳಸೂತ್ರದ ಬಗ್ಗೆ ಚರ್ಚೆ ನಡೆಸುತ್ತಾರೆ
– ಕಪಿಲ್‌ ಸಿಬಲ್ ರಾಜ್ಯಸಭಾ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT