ಛತ್ರಪತಿ ಸಂಭಾಜಿನಗರದ ಸಜಾಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜಲೀಲ್, ದೇಶದ 11 ರಾಜ್ಯಗಳ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದಿಂದ ಯಾರನ್ನೂ ಕಣಕ್ಕಿಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಮಹಾರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅಲ್ಲದೆ, ಮುಸ್ಲಿಂಮರಿಗೆ ಉಮೇದುವಾರಿಕೆ ನೀಡದ 11 ರಾಜ್ಯಗಳಿವೆ. ಗುಜರಾತ್, ರಾಜಸ್ಥಾನ, ಗೋವಾ ಮತ್ತು ದೆಹಲಿಯಲ್ಲಿ ಯಾವುದೇ ಮುಸ್ಲಿಂ ಸಂಸದರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೆ ಗೆಲ್ಲುವುದು ಹೇಗೆ?, 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಗರದ ಮುಖಂಡರು ನಾನು ಗೆಲ್ಲುವುದಿಲ್ಲ ಎಂದು ಹೇಳಿದ್ದರು. ಆದರೆ, ಜನ ನಮ್ಮೊಂದಿಗೆ ಇದ್ದರು. ನಾನು ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಛತ್ರಪತಿ ಸಂಭಾಜಿನಗರದಿಂದ (ಹಿಂದಿನ ಔರಂಗಬಾದ್) ಜಲೀಲ್ ಸ್ಪರ್ಧಿಸುತ್ತಿದ್ದಾರೆ. ಮೇ 13ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ.