ನವದೆಹಲಿ: ತಮ್ಮ ಬಣಕ್ಕೆ ’ಪ್ರೆಷರ್ ಕುಕ್ಕರ್‘ ಅನ್ನು ಸಾಮಾನ್ಯ ಚುನಾವಣಾ ಚಿಹ್ನೆಯಾಗಿ ಮಾನ್ಯ ಮಾಡಬೇಕು ಎಂದು ಟಿಟಿವಿ ದಿನಕರನ್ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಮುಂಬರುವ ಲೋಕಸಭಾ ಚುನಾವಣೆ ಹಾಗೂ ತಮಿಳುನಾಡು, ಪುದುಚೇರಿಯ ಉಪಚುನಾವಣೆಯಲ್ಲಿ ಸಮಾನ ಚಿಹ್ನೆ ನೀಡಬೇಕು ಎಂದು ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ’ಈ ಬಗ್ಗೆ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿತು. ಆದರೆ, ಪಕ್ಷದಿಂದ ಗೆಲ್ಲುವ ಅಭ್ಯರ್ಥಿಗಳನ್ನು ಪಕ್ಷೇತರ ಅಭ್ಯರ್ಥಿಗಳು ಎಂದು ಪರಿಗಣಿಸಬೇಕು‘ ಎಂದು ತಿಳಿಸಿದೆ.
ಇದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲರು, ’ಈಗಾಗಲೇ ಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಈ ಹಂತದಲ್ಲಿ ಎಲ್ಲರಿಗೂ ಒಂದೇ ಚಿಹ್ನೆ ನೀಡಲು ಸಾಧ್ಯವಿಲ್ಲ. ಆಯೋಗದಲ್ಲಿ ನೋಂದಣಿಯಾಗದ ಪಕ್ಷಕ್ಕೆ ಸಾಮಾನ್ಯ ಚಿಹ್ನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ‘ ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿನ 39 ಹಾಗೂ ಪುದುಚೇರಿಯ 1 ಲೋಕಸಭಾ ಕ್ಷೇತ್ರ, ತಮಿಳುನಾಡಿನ 19 ಹಾಗೂ ಪುದುಚೇರಿಯ 1 ವಿಧಾನಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಎಎಂಎಂಕೆ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.