ನವದೆಹಲಿ: ಫೆಬ್ರುವರಿ 24ರಂದು ಉತ್ತರ ಪ್ರದೇಶದ ಮುರಾದಾಬಾದ್ ಮೂಲಕ ಕಾಂಗ್ರೆಸ್ನ ಭಾರತ ಜೋಡೊ ನ್ಯಾಯಯಾತ್ರೆ ಸಾಗಲಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಪಶ್ಚಿಮ ಉತ್ತರ ಪ್ರದೇಶದುದ್ದಕ್ಕೂ ನಡೆಯುವ ಯಾತ್ರೆಯಲ್ಲಿ ಪ್ರಿಯಾಂಕಾ ಅವರು ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೂ ಆಮಂತ್ರಣ ನೀಡಲಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆಯು ಅಂತಿಮವಾಗಿರುವುದರಿಂದ ಅವರೂ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾತ್ರೆಯನ್ನು ಶನಿವಾರ ಬೆಳಿಗ್ಗೆ ಮುರಾದಾಬಾದ್ನಿಂದ ಮತ್ತೆ ಆರಂಭಿಸಲಾಗುವುದು. ಬಳಿಕ ಅದು ಸಂಭಾಲ್, ಅಲಿಗಢ, ಹಾಥರಸ್ ಮತ್ತು ಆಗ್ರ ಜಿಲ್ಲೆಗಳ ಮೂಲಕ ಸಾಗಿ ರಾಜಸ್ಥಾನದ ಢೋಲ್ಪುರದಲ್ಲಿ ಭಾನುವಾರ ಕೊನೆಗೊಳ್ಳಲಿದೆ. ಬಳಿಕ, ಫೆ.26ರಿಂದ ಮಾರ್ಚ್ 1ರ ವರೆಗೆ ಯಾತ್ರೆಗೆ ವಿರಾಮ ಇರಲಿದೆ.
ಪ್ರಿಯಾಂಕಾ ಅವರು ಈ ಹಿಂದೆಯೇ ಯಾತ್ರೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಭಾಗಿಯಾಗಲಿಲ್ಲ.