ಪುಣೆ: ಡಿಸೆಂಬರ್ 8 ರಂದು ಪುಣೆಯ ಪಿಂಪ್ರಿ–ಚಿಂಚ್ವಾಡ್ ಪ್ರದೇಶದ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಭಾನುವಾರ ರಾತ್ರಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಕಮಲ್ ಚೌರೆ (35) ಮತ್ತು ಉಷಾ ಪಾದ್ವಿ (40) ಮೃತಪಟ್ಟ ಮಹಿಳೆಯರು ಎಂದು ತಿಳಿದುಬಂದಿದೆ. ಏತನ್ಮಧ್ಯೆ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಕಾರ್ಖಾನೆಯ ಮಾಲೀಕನನ್ನು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 8ರಂದು ತಾಳವಾಡೆಯಲ್ಲಿರುವ ಮೇಣದ ಬತ್ತಿ ಕಾರ್ಖಾನೆಯಲ್ಲಿ ಮಧ್ಯಾಹ್ನ 2.45ರ ಹೊತ್ತಿಗೆ ಅಗ್ನಿ ಅವಘಡ ಸಂಭವಿಸಿತ್ತು. ದುರಂತದಲ್ಲಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರ್ಖಾನೆಯ ಮಾಲೀಕ ಸೇರಿದಂತೆ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.