ನವದೆಹಲಿ: ಖಾಲಿಸ್ತಾನ ಬೆಂಬಲಿಗರ ನಿಗ್ರಹಕ್ಕೆ ಕ್ರಮ ಕೈಗೊಂಡ ಕಾರಣ ಸಂಭವನೀಯ ಅಪಾಯವನ್ನು ಅರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೇಂದ್ರ ಸರ್ಕಾರವು ಝಡ್ ಪ್ಲಸ್ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಅತಿಗಣ್ಯರ ಕಾವಲು ದಳವು ಮಾನ್ಗೆ ಭದ್ರತೆ ನೀಡಲಿದೆ.
ಗುಪ್ತಚರ ಮಾಹಿತಿಯನ್ನು ಆಧರಿಸಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ಪುರಸ್ಕರಿಸಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರೂ ಆಗಿರುವ 49 ವರ್ಷದ ಮಾನ್ ಅವರಿಗೆ ದೇಶದಾದ್ಯಂತ ಝಡ್+ ಭದ್ರತೆ ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತ್ಯೇಕ ಖಾಲಿಸ್ತಾನ ಪ್ರತಿಪಾದಕ ಅಮೃತ್ಪಾಲ್ ಸಿಂಗ್ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಅದಾದ ನಂತರದ ಖಾಲಿಸ್ತಾನಿ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಗುಪ್ತಚರ ಇಲಾಖೆಯು ಮಾನ್ ಅವರಿಗೆ ಝಡ್+ ಭದ್ರತೆ ಒದಗಿಸುವಂತೆ ಶಿಫಾರಸು ಮಾಡಿತ್ತು ಎಂದೂ ತಿಳಿಸಿದ್ದಾರೆ.
55 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಯ ತಂಡ ಶೀಘ್ರವೇ ಭದ್ರತೆಯ ಹೊಣೆ ವಹಿಸಿಕೊಳ್ಳಲಿದೆ. ಮಾನ್ ಅವರ ಅಧಿಕೃತ ನಿವಾಸ ಹಾಗೂ ಕುಟುಂಬಕ್ಕೂ ಭದ್ರತೆ ನೀಡಲಾಗುತ್ತದೆ.