ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌ ದಾಖಲೆ ಕಳವು: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

Last Updated 7 ಮಾರ್ಚ್ 2019, 3:48 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಹೀಗೆ ಕಳವಾದ ದಾಖಲೆಗಳ ಆಧಾರದಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವ ‘ದಹಿಂದೂ’ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ.

ದಾಖಲೆ ಕಳ್ಳತನದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ತಿಳಿಸಿದ್ದಾರೆ. ಒಪ್ಪಂದದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕಳೆದ ಡಿಸೆಂಬರ್‌ 14ರಂದು ಸುಪ್ರೀಂ ಕೋರ್ಟ್‌ ವಜಾ ಮಾಡಿ ತೀರ್ಪು ನೀಡಿತ್ತು. ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳನ್ನು ಈ ಪೀಠವು ವಿಚಾರಣೆ ನಡೆಸುತ್ತಿದೆ.

ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ವಕೀಲ ಪ್ರಶಾಂತ್‌ ಭೂಷಣ್‌ ಅವರು ತೀರ್ಪು ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದವರಲ್ಲಿ ಸೇರಿದ್ದಾರೆ.

ರಫೇಲ್‌ ಒಪ್ಪಂದದ ಬ್ಯಾಂಕ್‌ ಖಾತರಿಗೆ ಸಂಬಂಧಿಸಿ ಹಿರಿಯ ಪತ್ರಕರ್ತ ಎನ್‌. ರಾಮ್‌ ಅವರು ಬರೆದ ವರದಿ ಬುಧವಾರದ ‘ದ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವರದಿಯನ್ನು ಪ್ರಶಾಂತ್‌ ಭೂಷಣ್‌ ಅವರು ಪ್ರಸ್ತಾಪಿಸಿದಾಗ ಅದಕ್ಕೆ ವೇಣುಗೋಪಾಲ್‌ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕಳ್ಳತನವಾದ ದಾಖಲೆಗಳ ಆಧಾರದಲ್ಲಿ ಈ ವರದಿಗಳನ್ನು ಬರೆಯಲಾಗಿದೆ ಎಂದು ಅವರು ಹೇಳಿದರು. ಕಳ್ಳತನದ ಬಗ್ಗೆ ಈವರೆಗೆ ಎಫ್‌ಐಆರ್‌ ದಾಖಲಾಗಿಲ್ಲ ಎಂದೂ ಅವರು ತಿಳಿಸಿದರು.

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ರಾಮ್‌ ಅವರು ಫೆಬ್ರುವರಿ 8ರಂದು ಮೊದಲ ವರದಿ ಬರೆದಿದ್ದರು. ನ್ಯಾಯಾಲಯದ ಕಲಾಪದ ಮೇಲೆ ಪ್ರಭಾವ ಬೀರುವುದೇ ಇದರ ಉದ್ದೇಶವಾಗಿತ್ತು ಎಂದು ವೇಣುಗೋಪಾಲ್‌ ಆರೋಪಿಸಿದರು. ಇದು ನ್ಯಾಯಾಂಗ ನಿಂದನೆ ಎಂದು ಅವರು ವಾದಿಸಿದರು.

ದಾಖಲೆಗಳ ಮೇಲ್ಭಾಗದಲ್ಲಿ ‘ರಹಸ್ಯ’ ಎಂಬ ಒಕ್ಕಣೆ ಇತ್ತು. ಆದರೆ, ಅದನ್ನು ಅಳಿಸಿ ಹಾಕಿ ಈ ದಾಖಲೆಗಳನ್ನು ‘ದ ಹಿಂದೂ’ ಪ್ರಕಟಿಸಿದೆ ಎಂದೂ ವೇಣುಗೋಪಾಲ್‌ ಹೇಳಿದ್ದಾರೆ.

ಕದ್ದ ದಾಖಲೆಗಳನ್ನು ಇಟ್ಟುಕೊಂಡು ವರದಿಗಳನ್ನು ಬರೆಯಲಾಗಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಹಾಗಿರುವಾಗ, ಈ ಕಳ್ಳತನದ ಬಗ್ಗೆ ಕೈಗೊಂಡ ಕ್ರಮ ಏನು ಎಂದು ಪೀಠವು ತಿಳಿಯಲು ಬಯಸಿತು.

ರಫೇಲ್‌ ಒಪ್ಪಂದದ ಬಗ್ಗೆ ಎಫ್‌ಐಆರ್‌ ಸಲ್ಲಿಕೆ ಆಗಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನುನಿರ್ಣಾಯಕ ದಾಖಲೆಗಳನ್ನು ಮುಚ್ಚಿಟ್ಟ ಕಾರಣದಿಂದಲೇ ಸುಪ್ರೀಂ ಕೋರ್ಟ್‌ ವಜಾ ಮಾಡಿತು ಎಂದು ಪ್ರಶಾಂತ್‌ ಭೂಷಣ್‌ ವಾದಿಸಿದರು.

ವಿಚಾರಣೆ ನಡೆಸುವಂತಿಲ್ಲ: ಕೇಂದ್ರ

ರಫೇಲ್‌ ಒಪ್ಪಂದವು ರಕ್ಷಣಾ ಖರೀದಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಇದನ್ನು ನ್ಯಾಯಾಂಗದ ವಿಶ್ಲೇಷಣೆಗೆ ಒಳಪಡಿಸುವುದು ಸಾಧ್ಯವಿಲ್ಲ ಎಂದು ಅಟಾರ್ನಿ ಜನರಲ್‌ ವಾದಿಸಿದ್ದಾರೆ.

‘ಯುದ್ಧ ಘೋಷಿಸಿದಾಗಲೂ ನಾವು ಅದನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಬೇಕೇ? ಶಾಂತಿ ಘೋಷಿಸುವಾಗಲೂ ಮತ್ತೆ ನ್ಯಾಯಾಲಯಕ್ಕೆ ಬಂದು ಅನುಮತಿ ಪಡೆಯಬೇಕೇ’ ಎಂದು ಅವರು ಪ್ರಶ್ನಿಸಿದರು.

‘ಎಫ್‌–16 ವಿರುದ್ಧ ರಫೇಲ್‌ ಬೇಕು’

ಇತ್ತೀಚೆಗೆ ನಮ್ಮ ಮೇಲೆ ಬಾಂಬ್‌ ಹಾಕಲು ಬಂದಿದ್ದ ಎಫ್‌–16 ವಿಮಾನಗಳಿಂದ ದೇಶವನ್ನು ರಕ್ಷಿಸಲು ರಫೇಲ್‌ ಯುದ್ಧ ವಿಮಾನಗಳು ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಈ ಮೂಲಕ, ಕಳೆದ ವಾರ ಪಾಕಿಸ್ತಾನದ ಜತೆಗೆ ನಡೆದ ವೈಮಾನಿಕ ಸಂಘರ್ಷವನ್ನು ಉಲ್ಲೇಖಿಸಿದೆ.

‘ರಫೇಲ್‌ ಇಲ್ಲದೆ ಅವರಿಗೆ ಪ್ರತಿರೋಧ ಒಡ್ಡುವುದು ಹೇಗೆ’ ಎಂದು ಅಟಾರ್ನಿ ಜನರಲ್‌ ಪ್ರಶ್ನಿಸಿದರು. 1960ರ ದಶಕದಲ್ಲಿ ಖರೀದಿಸಲಾದ ಮಿಗ್‌ 21 ವಿಮಾನಗಳು ಎಫ್‌–16 ಯುದ್ಧ ವಿಮಾನಗಳ ವಿರುದ್ಧ ಚೆನ್ನಾಗಿ ಹೋರಾಡಿವೆ. ಹಾಗಿದ್ದರೂ ನಮಗೆ ರಫೇಲ್‌ ಯುದ್ಧ ವಿಮಾನಗಳ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು. ಈ ತುರ್ತಿನ ಕಾರಣಕ್ಕೇ ರಫೇಲ್‌ ಒಪ್ಪಂದದ ಮಾತುಕತೆ ಆರಂಭವಾಯಿತು. ಎರಡು ತುಕಡಿ ರಫೇಲ್‌ ಯುದ್ಧ ವಿಮಾನಗಳು ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿವೆ. ಮೊದಲ ತುಕಡಿ ಈ ಸೆಪ್ಟೆಂಬರ್‌ನಲ್ಲಿಯೇ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಮೂಲ ಬಿಟ್ಟುಕೊಡುವುದಿಲ್ಲ: ರಾಮ್‌

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ವರದಿಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕಟಿಸಲಾಗಿದೆ. ಇದಕ್ಕೆ ಆಧಾರವಾಗಿರುವ ದಾಖಲೆಗಳನ್ನು ಒದಗಿಸಿದ ರಹಸ್ಯ ಮೂಲಗಳು ಯಾವುವು ಎಂಬ ಮಾಹಿತಿಯನ್ನು ‘ದ ಹಿಂದೂ’ ಪತ್ರಿಕೆಯಿಂದ ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಈ ದಾಖಲೆಗಳೇ ಎಲ್ಲವನ್ನೂ ಹೇಳುತ್ತವೆ, ನಮ್ಮ ವರದಿಗಳೇ ಎಲ್ಲವನ್ನೂ ಹೇಳುತ್ತವೆ ಎಂದು ದ ಹಿಂದೂ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಎನ್‌. ರಾಮ್‌ ಹೇಳಿದ್ದಾರೆ.

‘ವಿವರಗಳನ್ನು ತಡೆ ಹಿಡಿಯಲಾಗಿತ್ತು ಅಥವಾ ಮುಚ್ಚಿಡಲಾಗಿತ್ತು ಎಂಬ ಕಾರಣದಿಂದಾಗಿಯೇ ಈ ದಾಖಲೆಗಳನ್ನು ಪ್ರಕಟಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿನ ವಿಚಾರಣೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನಾವು ಪ್ರಕಟಿಸಿರುವುದು ಅಧಿಕೃತ ದಾಖಲೆಗಳು. ಸಾರ್ವಜನಿಕ ಹಿತಾಸಕ್ತಿಯ ಅಗತ್ಯ ಮಾಹಿತಿ ಅಥವಾ ವಿಚಾರಗಳನ್ನು ತನಿಖಾ ಪತ್ರಿಕೋದ್ಯಮದ ಮೂಲಕ ಹೊರಗೆ ತರುವುದು ಮಾಧ್ಯಮದ ಕರ್ತವ್ಯ’ ಎಂದು ರಾಮ್‌ ಹೇಳಿದ್ದಾರೆ.

ಭಾರತದ ಸಂವಿಧಾನವು ನೀಡಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನಾವು ಪ್ರಕಟಿಸಿರುವ ವರದಿಗೆ ರಕ್ಷಣೆ ಇದೆ. ಮಾಹಿತಿ ಹಕ್ಕು ಕಾಯ್ದೆಯೂ ಅಗತ್ಯ ರಕ್ಷಣೆ ಒದಗಿಸುತ್ತದೆ ಎಂದಿದ್ದಾರೆ.

ಮೋದಿ ವಿರುದ್ಧ ಎಫ್‌ಐಆರ್‌ಗೆ ಕಾಲ ಸನ್ನಿಹಿತ: ಕಾಂಗ್ರೆಸ್‌

ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷವು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕಾಲ ಸನ್ನಿಹಿತವಾಗಿದೆ ಎಂದಿದೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 13 (1) (ಡಿ) ಅಡಿಯಲ್ಲಿನ ಬಹಳ ಸ್ಪಷ್ಟವಾದ ಪ್ರಕರಣ ಇದು. ಅಧಿಕಾರದ ಅತ್ಯುನ್ನತದ ಸ್ಥಾನಗಳಲ್ಲಿ ಇರುವವರು ನಡೆಸಿರಬಹುದಾದ ಭ್ರಷ್ಟಾಚಾರವು ಸಮಯ ಮಿತಿ ಹಾಕಿಕೊಂಡು ನಡೆಸುವ ತನಿಖೆಯಿಂದ ಬಯಲಾಗಲಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಶಂಕಾಸ್ಪದ ವ್ಯವಹಾರಗಳು, ಭ್ರಷ್ಟಾಚಾರ ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ನಿರ್ಲಕ್ಷ್ಯವನ್ನು ಮುಚ್ಚಿಡುವುದಕ್ಕಾಗಿ ಮೋದಿ ಅವರು ಸಂಸತ್ತು ಮತ್ತು ದೇಶವನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆಗಿದೆ ಎಂಬುದು ಈಗ ಬಯಲಾಗಿದೆ. ಡಾಸೋ ಏವಿಯೇಷನ್‌ ಕಂಪನಿಗೆ ಲಾಭ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ದುರುಪಯೋಗ ಮಾಡಿದ್ದಾರೆ. ಇದರಿಂದ ದೇಶದ ಬೊಕ್ಕಸಕ್ಕೆ ನಷ್ಟವಾಗಿದೆ’ ಎಂಬುದು ಬಹಳ ಸ್ಪ‍ಷ್ಟ ಎಂದು ಅವರು ಹೇಳಿದ್ದಾರೆ.

* ಇವು ಕದ್ದ ದಾಖಲೆಗಳು ಎಂದು ನೀವು ಹೇಳಬಹುದು... ಅದು ನಮಗೆ ಸಂಬಂಧಿಸಿದ ವಿಚಾರ ಅಲ್ಲ. ನಮಗೆ ಇವು ರಹಸ್ಯ ಮೂಲಗಳಿಂದ ಬಂದಿವೆ, ಆ ಮೂಲಗಳ ಮಾಹಿತಿ ಬಿಟ್ಟುಕೊಡದಿರಲು ನಾವು ಬದ್ಧ

– ಎನ್‌. ರಾಮ್‌, ದ ಹಿಂದೂ ಪ್ರಕಾಶನ ಸಂಸ್ಥೆಯ ಅಧ್ಯಕ್ಷ

* ರಫೇಲ್‌ ಬಗ್ಗೆ ಏನೇ ಹೇಳಿದರೂ ಅದರಿಂದ ಸರ್ಕಾರ ಅಥವಾ ವಿರೋಧ ಪಕ್ಷಗಳು ಅಸ್ಥಿರಗೊಳ್ಳಬಹುದು. ಹಾಗಾಗಿ ಕೋರ್ಟ್‌ ಏನನ್ನೂ ಹೇಳಬಾರದು

- ಕೆ.ಕೆ. ವೇಣುಗೋಪಾಲ್, ಅಟಾರ್ನಿ ಜನರಲ್‌

* ರಫೇಲ್‌ ಪ್ರಕರಣದ ತನಿಖೆ ಮೋದಿ ಅವರಿಂದ ಆರಂಭಗೊಂಡು ಅವರಲ್ಲಿಯೇ ಅಂತ್ಯವಾಗುತ್ತದೆ. ಅವರ ವಿರುದ್ಧ ತನಿಖೆ ನಡೆಸಲು ಬೇಕಾದಷ್ಟು ಸಾಕ್ಷ್ಯಗಳು ಇವೆ

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT