ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ ಚೀನಾ ಭಯ: ರಾಹುಲ್‌ ಗಾಂಧಿ ಟೀಕೆ

Last Updated 27 ಫೆಬ್ರುವರಿ 2021, 11:50 IST
ಅಕ್ಷರ ಗಾತ್ರ

ಟುಟಿಕಾರನ್‌, ತಮಿಳುನಾಡು: ಚೀನಾ- ಭಾರತದ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ‘ಪೂರ್ವ ನೆರೆಯ ದೇಶಕ್ಕೆ ಮೋದಿ ಹೆದರಿದ್ದಾರೆ’ ಎಂದು ಆರೋಪಿಸಿದರು.

ಏಪ್ರಿಲ್‌ 6ಕ್ಕೆ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಹಮ್ಮಿಕೊಂಡಿರುವ ಮೂರು ದಿನಗಳ ಪ್ರವಾಸಕ್ಕೆ ಇಲ್ಲಿ ಶನಿವಾರ ಚಾಲನೆ ನೀಡಿ, ನಂತರ ವಕೀಲರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.

ಪ್ಯಾಂಗಾಂಗ್‌ ಸರೋವರ ಪ್ರದೇಶಗಳ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಸೇನಾಪಡೆಗಳು, ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಯಂತ್ರೋಪಕರಣಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಪೂರ್ಣಗೊಳ್ಳುವ ಮೂಲಕ ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷ ನಿಷ್ಕ್ರಿಯಗೊಳಿಸುವ ಮೊದಲು, ಚೀನಿಯರು ಅತಿಕ್ರಮಣ ಆಲೋಚನೆಯನ್ನು ದೋಕಲಾದಲ್ಲಿ ಪರೀಕ್ಷೆಗೆ (2017ರಲ್ಲಿ) ಒಳಪಡಿಸಿದ್ದರು ಎಂದು ಅವರು ಹೇಳಿದರು.

‘ಚೀನೀಯರು ನಮ್ಮ ದೇಶದ ಪ್ರಮುಖ ಕಾರ್ಯತಂತ್ರದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಭಾರತದ ಪ್ರತಿಕ್ರಿಯೆ ನೋಡಲು ತಮ್ಮ ಅತಿಕ್ರಮಣದ ಆಲೋಚನೆಯನ್ನು ಅವರು ಮೊದಲು ದೋಕಲಾದಲ್ಲಿ ಪರೀಕ್ಷಿಸಿದ್ದರು. ಭಾರತ ಪ್ರತಿಕ್ರಿಯಿಸುವುದಿಲ್ಲ ಎನ್ನುವುದನ್ನು ಅರಿತು, ಅದನ್ನು ಲಡಾಖ್‌ನಲ್ಲಿ ಮತ್ತೊಮ್ಮೆ ಪರೀಕ್ಷಿಸಿದ್ದಾರೆ. ಮುಂದೆ ಅವರು ಅದನ್ನು ಅರುಣಾಚಲಪ್ರದೇಶದ ಮೇಲೂ ಪರೀಕ್ಷಿಸಲಿದ್ದಾರೆ’ ಎಂದು ರಾಹುಲ್ ಹೇಳಿದ್ದಾರೆ.

ಗಡಿ ಸಂಘರ್ಷದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ರಾಹುಲ್‌, ‘ಚೀನಾ ಅತಿಕ್ರಮಣ ನಡೆಸಿದಾಗ ಪ್ರಧಾನಿ ಮೋದಿಯವರ ಮೊದಲ ಪ್ರತಿಕ್ರಿಯೆ ‘ಭಾರತದೊಳಕ್ಕೆ ಯಾರೂ ಬಂದಿಲ್ಲ’ ಎನ್ನುವುದಾಗಿತ್ತು. ಇದರಿಂದಾಗಿ ಭಾರತದ ಪ್ರಧಾನಿ ನಮಗೆ ಹೆದರಿಕೊಂಡಿದ್ದಾರೆ ಎನ್ನುವ ಸೂಚನೆ ಚೀನಾದವರಿಗೆ ಸಿಕ್ಕಿತು. ಭಾರತದ ಪ್ರಧಾನಿ ನಮ್ಮ ಎದುರು ನಿಲ್ಲಲು ಹೆದರುತ್ತಾರೆ ಎನ್ನುವುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅದೇ ಆಧಾರದ ಮೇಲೆ ಚೀನಾದವರು ಈಗಲೂ ಮಾತುಕತೆ ನಡೆಸಿದ್ದಾರೆ’ ಎಂದು ಟೀಕಿಸಿದರು.

‘ನನ್ನ ಮಾತನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ, ಡೆಪ್ಸಾಂಗ್‌ನಲ್ಲಿರುವ ನಮ್ಮ ನೆಲ ಅತ್ಯಂತ ಮುಖ್ಯವಾದುದು. ಇದು ಚೀನಾದವರು ಆಕ್ರಮಿಸಿಕೊಂಡಾಗಿದೆ. ಇದು ನಮಗೆ ಮರಳಿ ಸಿಗದು, ನಮ್ಮ ಪ್ರಧಾನಿ ಕೂಡ ಆ ಭೂಮಿಯನ್ನು ಮರಳಿ ಪಡೆಯುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ಸರಿಪಡಿಸಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಅಷ್ಟೇ. ಆದರೆ, ನಮ್ಮ ದೇಶ ಆ ಪ್ರದೇಶವನ್ನು ಕಳೆದುಕೊಳ್ಳಲಿದೆ’ ಎಂದರು.

‘ದೇಶದೊಳಕ್ಕೆ ಯಾರೂ ಬಂದಿಲ್ಲ’ ಎಂದು ಪ್ರಧಾನಿ ನೀಡಿರುವ ಸಂದೇಶ ಭವಿಷ್ಯದಲ್ಲಿ ಭಾರತಕ್ಕೆ ಅಪಾಯ ತಂದೊಡ್ಡಲಿದೆ. ಇದರಿಂದಾಗಿ ಚೀನಾದವರು ಲಡಾಖ್‌ನಲ್ಲಿ ನಡೆಸುತ್ತಿರುವ ಸಂಘರ್ಷವನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗ ಯಾವುದೇ ಹಿಂಜರಿಕೆ ಇಲ್ಲದೇ ಚೀನಾದೊಂದಿಗೆ ವ್ಯವಹರಿಸಿದೆ. ಭಾರತವನ್ನು ಸುತ್ತುವರಿಯಲು ನಮ್ಮಿಂದ ಸಾಧ್ಯವಿಲ್ಲವೆಂದು ಚೀನಾದವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. 2013ರಲ್ಲಿ ಚೀನಾದವರು ಭಾರತದ ಗಡಿ ಅತಿಕ್ರಮಿಸಲು ಮುಂದಾದಾಗ ನಾವು ದಿಟ್ಟ ಕ್ರಮ ಕೈಗೊಂಡಿದ್ದೇವೆ. ನಾವು ಪ್ರತಿಯಾಗಿ ಅವರ ಪ್ರದೇಶಗಳನ್ನು ಆಕ್ರಮಿಸಿಕೊಂಡು, ಅವರೇ ರಾಜಿಮಾಡಿಕೊಳ್ಳುವಂತೆ ಮಾಡಿದ್ದೆವು. ಈಗಿನ ಪ್ರಧಾನಿಗೆ ಧೈರ್ಯವಿಲ್ಲ, ಪ್ರಧಾನಿಯೇ ರಾಜಿ ಮಾಡಿಕೊಳ್ಳಲಿದ್ದಾರೆ ಎನ್ನುವುದು ಚೀನಾದವರಿಗೆ ತಿಳಿದಿದೆ’ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT