ನವದೆಹಲಿ: ಆಂಧ್ರ ಬ್ಯಾಂಕ್ಗೆ ₹5 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಉದ್ಯಮಿ ನಿತಿನ್ ಸಂದೇಸರ ಕುಟುಂಬಸಮೇತ ನೈಜೀರಿಯಾಕ್ಕೆ ಪಲಾಯನ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಗುಜರಾತ್ನ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ಒಡೆಯರಾಗಿರುವ ಸಂದೇಸರ ಕಳೆದ ತಿಂಗಳು ದುಬೈನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ಮೂಲಗಳು ಈ ವರದಿಯನ್ನು ನಿರಾಕರಿಸಿದ್ದು, ಆರೋಪಿಯು ನೈಜೀರಿಯಾಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿವೆ.
ವಂಚನೆ ಆರೋಪಕ್ಕೆ ಸಂಬಂಧಿಸಿ ಸ್ಟರ್ಲಿಂಗ್ ಬಯೋಟೆಕ್ ಹಾಗೂ ಅದರ ನಿರ್ದೇಶಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಆಂಧ್ರ ಬ್ಯಾಂಕ್ನ ಮಾಜಿ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.
ಆಂಧ್ರ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದಿಂದ ₹5 ಸಾವಿರ ಕೋಟಿ ಸಾಲ ಪಡೆದು ಮರುಪಾವತಿ ಮಾಡಲಾಗಿಲ್ಲ. ಇದು ಮರುಪಾವತಿಯಾಗದ ಸಾಲ (ಎನ್ಪಿಎ) ಆಗಿ ಪರಿವರ್ತನೆಗೊಂಡಿದೆ. 2016ರ ಡಿಸೆಂಬರ್ 31ರ ಲೆಕ್ಕಾಚಾರ ಪ್ರಕಾರ, ಕಂಪನಿಯು ಒಟ್ಟು ₹5,383 ಕೋಟಿ ಪಾವತಿ ಮಾಡುವುದು ಬಾಕಿ ಇದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.