ಕೋಲ್ಕತ್ತ: ಟಿಎಂಸಿಯಿಂದ ಅಮಾನತುಗೊಂಡಿರುವ ಮುಖಂಡ ಶಾಜಹಾನ್ ಶೇಖ್ ಅವರ ಇಬ್ಬರು ಆಪ್ತ ಉದ್ಯಮಿಗಳ ಸಂದೇಶ್ಖಾಲಿಯಲ್ಲಿರುವ ಮನೆಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಶೋಧ ನಡೆಸಿದರು.
ಪಡಿತರ ಹಗರಣಕ್ಕೆ ಸಂಬಂಧಿಸಿ ಈ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು. ಉದ್ಯಮಿಯೊಬ್ಬರಿಗೆ ಸೇರಿದ ಮಾರುಕಟ್ಟೆಯಲ್ಲೂ ಶೋಧ ನಡೆದಿದೆ.
ಪಡಿತರ ವಿತರಣೆಗೆ ಮೀಸಲಿರಿಸಿದ್ದ ಹಣವನ್ನು ಮೀನು ವ್ಯಾಪಾರಕ್ಕೆ ಬಳಸಲು ಈ ಉದ್ಯಮಿಗಳು ಶೇಖ್ ಅವರಿಗೆ ಸಹಾಯ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯಕ್ಕೆ ತೆರಳಿದ್ದ ಇ.ಡಿ ಅಧಿಕಾರಿಗಳ ಮೇಲೆ ಜನವರಿ 5ರಂದು ನಡೆದಿದ್ದ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಶೇಖ್ ಅವರು ಸದ್ಯ ಸಿಬಿಐ ವಶದಲ್ಲಿದ್ದಾರೆ.