ನವದೆಹಲಿ: ಬಿಜೆಪಿ ಸಂಸದ ಸುಕಾಂತ ಮಜುಂದರ್ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎನ್ನುವ ಕಾರಣಕ್ಕೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿ.ಜಿ.ಪಿ ಹಾಗೂ ಇತರರಿಗೆ ಲೋಕಸಭೆಯ ಹಕ್ಕುಭಾದ್ಯತಾ ಸಮಿತಿ ನೀಡಿದ್ದ ನೋಟಿಸ್ಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಹಿಂಸಾಚಾರ ಪೀಡಿತ ಸಂದೇಶ್ಖಾಲಿಗೆ ತೆರಳುವ ವೇಳೆ ಸುಕಾಂತ ಅವರನ್ನು ಪೊಲೀಸರು ತಡೆದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಂಘರ್ಷ ಉಂಟಾಗಿ, ಸುಕಾಂತ ಅವರಿಗೆ ಗಾಯಗಳಾಗಿದ್ದವು.
ರಾಜ್ಯ ಸರ್ಕಾರದ ಅಧಿಕಾರಿಗಳ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಅವರ ವಾದವನ್ನು ಆಲಿಸಿದ, ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲ ಅವರಿದ್ದ ಪೀಠ, ಸಚಿವಾಲಯದ ನೋಟಿಸ್ಗೆ ತಡೆ ನೀಡಿತು.