ಇಂದೋರ್: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕರು ತಮ್ಮ ಕರ್ತವ್ಯದ ಜೊತೆಗೆ ಕೋವಿಡ್–19ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೂ ನೆರವಾಗುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಕೊರೊನಾ ಸಂಬಂಧಿತ ಮಾರ್ಗಸೂಚಿಯ ಅನುಸಾರ, ಸೋಂಕಿನಿಂದ ಮೃತಪಡುವವರ ಅಂತ್ಯಕ್ರಿಯೆಯಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಅಲ್ಲದೇ, ಸೋಂಕು ಹರಡುವ ಭೀತಿಯಿಂದ ಬಹುತೇಕ ಸಂಬಂಧಿಕರು ಮೃತರ ಹತ್ತಿರ ಬರುವುದಿಲ್ಲ.ಹೀಗಾಗಿ, ಅಂತ್ಯಕ್ರಿಯೆ ನೆರವೇರಿಸಲುಸ್ವಚ್ಛತಾ ಕಾರ್ಮಿಕರು ಸಹಕಾರ ನೀಡುತ್ತಿದ್ದಾರೆ.
‘ಯಾವುದೇ ಧರ್ಮದ ವ್ಯಕ್ತಿ ಮೃತಪಟ್ಟರೂ, ಅವರ ಅಂತ್ಯಕ್ರಿಯೆಗೆ ನೆರವಾಗುತ್ತಿದ್ದೇವೆ. ಅವರೊಂದಿಗೆ ನಮಗೆ ರಕ್ತ ಸಂಬಂಧ ಇಲ್ಲದೇ ಇರಬಹುದು. ಆದರೆ, ಮಾನವೀಯತೆಯಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಅಂತ್ಯಕ್ರಿಯೆಗೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಸ್ವಚ್ಛತಾ ಕಾರ್ಮಿಕ ಸೋಹನ್ ಲಾಲ್ ಖಟ್ವಾ ತಿಳಿಸಿದ್ದಾರೆ.
ಈವರೆಗೆ ಇಂದೋರ್ನಲ್ಲಿ 1,568 ಸೋಂಕಿತರಿದ್ದು, 76 ಮಂದಿ ಮೃತಪಟ್ಟಿದ್ದಾರೆ.