ನವದೆಹಲಿ: ‘ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ತಮ್ಮ ಕುಟುಂಬದ ಸದಸ್ಯರ ಜತೆ ಮುಕ್ತ ಭೇಟಿಗೂ ಅವಕಾಶ ನೀಡುತ್ತಿಲ್ಲ’ ಎಂದು ಎಎಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಶನಿವಾರ ಕಿಡಿಕಾರಿದ್ದಾರೆ.
‘ಕೇಜ್ರಿವಾಲರ ನೈತಿಕತೆಯನ್ನು ಕುಗ್ಗಿಸುವ ಯತ್ನ ಇದಾಗಿದೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.
‘ಜೈಲಿನೊಳಗಿರುವ ಕೊಠಡಿಯೊಂದಕ್ಕೆ ಅಳವಡಿಸಿರುವ ಕಬ್ಬಿಣದ ಬಲೆಯ ಹಿಂಬದಿಯಿಂದ ಕೇಜ್ರಿವಾಲ್ ತಮ್ಮ ಕುಟುಂಬದವರನ್ನು ಭೇಟಿಯಾಗಬೇಕಿದೆ. ಮೂರು ಬಾರಿ ಮುಖ್ಯಮಂತ್ರಿಯಾದವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಜ್ಞೆಯಂತೆ ಅವಮಾನಿಸಲಾಗುತ್ತಿದೆ. ಇದು ಅಮಾನವೀಯ. ಆದರೆ ಇಲ್ಲಿಯೇ ಇರುವ ಕ್ರಿಮಿನಲ್ ಆರೋಪಿಗಳಿಗೆ ಮುಕ್ತ ಭೇಟಿಯ ಅವಕಾಶ ಕೊಡಲಾಗಿದೆ’ ಎಂದು ಸಂಜಯ್ ಆರೋಪಿಸಿದರು.
‘ಕೇಜ್ರಿವಾಲ್ ಭೇಟಿಗಾಗಿ ನನಗೆ ಟೋಕನ್ ನೀಡಿದ್ದ ಜೈಲು ಆಡಳಿತವು, ನಂತರ ಭದ್ರತೆಯ ಕಾರಣ ನೀಡಿ ರದ್ದುಗೊಳಿಸಿದೆ’ ಎಂದೂ ಹೇಳಿದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲು ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಂಜಯ್ ಸಿಂಗ್ ಆರೋಪಕ್ಕೆ ತಿರುಗೇಟು ನೀಡಿರುವ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ್, ‘ಕೆಲ ತಿಂಗಳು ಜೈಲಿನಲ್ಲಿದ್ದವರು, ಜೈಲಿನ ಕೈಪಿಡಿ ಬಗ್ಗೆ ತಿಳಿವಳಿಕೆ ಹೊಂದಿರಬೇಕು’ ಎಂದಿದ್ದಾರೆ.