ನವದೆಹಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ವಿಚಾರಣೆಯ ಮೇಲ್ವಿಚಾರಣೆಯನ್ನು ನಡೆಸುವಂತೆ ಬಾಂಬೆ ಹೈಕೋರ್ಟ್ಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು.
ಮುಕ್ತಾ ದಾಭೋಲ್ಕರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಂನಾಥ್, ಚಂದ್ರಶರ್ಮಾ ಅವರಿದ್ದ ಪೀಠ ನಡೆಸಿತು. ಮೇಲ್ವಿಚಾರಣೆ ನಡೆಸಲು ನಿರಾಕರಿಸಿ ಬಾಂಬೆ ಹೈಕೋರ್ಟ್ ಏಪ್ರಿಲ್ 2023ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು.
‘ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಪೀಠ ಬಯಸುವುದಿಲ್ಲ. ಆದರೆ, ತನಿಖೆಗೆ ನೆರವಾಗುತ್ತದೆ ಎಂದು ತಾವು ಭಾವಿಸುವ ಯಾವುದೇ ಮಾಹಿತಿಯನ್ನು ಒದಗಿಸಲು ಅರ್ಜಿದಾರರು ಮುಕ್ತ ಅವಕಾಶವನ್ನು ಹೊಂದಿದ್ದಾರೆ’ ಎಂದು ತಿಳಿಸಿತು.