ಮುಂಬೈ: ಅಯೋಧ್ಯೆ ಜೊತೆ ಶಿವಸೇನೆಗೆ ಹಳೆಯ ನಂಟಿದೆ. ಹಾಗಾಗಿ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಶಿವ ಸೇನಾ(ಯುಬಿಟಿ) ಬಣದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನದ ಅಗತ್ಯವಿಲ್ಲ ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಶಿವ ಸೇನಾವನ್ನು ಟೀಕಿಸಿದಾಗ, ಬಾಳಾ ಠಾಕ್ರೆ ಅವರು ಅದರ ಹೊಣೆ ಹೊತ್ತಿದ್ದರು ಎಂದಿದ್ದಾರೆ.
ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ.
‘ಉದ್ಧವ್ ಠಾಕ್ರೆ ಅವರನ್ನು ಅಯೋಧ್ಯೆಗೆ ಆಹ್ವಾನಿಸುವ ಅಗತ್ಯವಿಲ್ಲ. ನಾವು ನಿಮಗಿಂತಲೂ(ಬಿಜೆಪಿ) ಮುನ್ನ ಅಯೋಧ್ಯೆಯಲ್ಲಿದ್ದೆವು’ ಎಂದು ಠಾಕ್ರೆ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆಯೇ? ಎಂಬ ಪ್ರಶ್ನೆಗೆ ರಾವುತ್ ಉತ್ತರಿಸಿದರು.
ಬಾಳಾ ಠಾಕ್ರೆ ಅವರ ಮುಂಬೈನ ಮಾತೋಶ್ರೀ ನಿವಾಸದಲ್ಲಿ ವಿಶ್ವ ಹಿಂದೂ ಪರಿಷತ್ನ ಮುಖ್ಯಸ್ಥರಾಗಿದ್ದ ಅಶೋಕ್ ಸಿಂಘಾಲ್ ಅವರು ಸಭೆ ನಡೆಸುತ್ತಿದ್ದರು. ಆ ಸಮಯದಲ್ಲಿ ಬಿಜೆಪಿ ಇರಲಿಲ್ಲ ಎಂದು ರಾವುತ್ ಹೇಳಿದ್ದಾರೆ.