ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶಿವಸೇನಾ ಮಾಜಿ ಶಾಸಕ ವಿಜಯ್ ಶಿವತಾರೆ ಬುಧವಾರ ತಿಳಿಸಿದರು. ಕ್ಷೇತ್ರವು ಪವಾರ್ ಕುಟುಂಬದ ಭದ್ರಕೋಟೆಯಾಗಿದೆ.
ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅಹಂಕಾರದ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದರು.
‘ನಮೋ ವಿಚಾರ ಮಂಚ್’ ವೇದಿಕೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಘೋಷಿಸಿ, ‘ಪ್ರತಿಷ್ಠಿತ ಕ್ಷೇತ್ರದ ಮತದಾರರ ಧ್ವನಿ’ ಎಂದು ತಮ್ಮನ್ನು ಕರೆದುಕೊಂಡರು.
ಮೂರು ಬಾರಿ ಸಂಸದೆಯಾಗಿರುವ ಸುಪ್ರಿಯಾ ಸುಳೆ ಅವರು ಸದ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಎನ್ಸಿಪಿಯಿಂದ (ಶರದ್ಚಂದ್ರ ಪವಾರ್ ಬಣ) ಸುಪ್ರಿಯಾ ಸುಳೆ ಈ ಕ್ಷೇತ್ರದ ಅಭ್ಯರ್ಥಿ ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಇತ್ತೀಚೆಗೆ ತಿಳಿಸಿದ್ದರು. ಎನ್ಸಿಪಿ ಮತ್ತೊಂದು ಬಣದಿಂದ ಅಜಿತ್ ಪವಾರ್ ಪತ್ನಿ ಸುನೇತ್ರ ಕಣಕ್ಕಿಳಿಯಲಿದ್ದಾರೆ ಎಂಬ ಅಂದಾಜಿದೆ.