ಮುಂಬೈ: ‘ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)’ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಗುರುವಾರ ಹೇಳಿದ್ದಾರೆ.
‘ಶಾಸಕರನ್ನು ಅನರ್ಹಗೊಳಿಸಬೇಕೆಂದು ಉಭಯ ಬಣಗಳು ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪಕ್ಷದ ಸಂಸ್ಥಾಪಕ ಶರದ್ ಪವಾರ್ ಅವರನ್ನು ಪ್ರಶ್ನಿಸುವ ಅಥವಾ ಅವರ ಇಚ್ಛೆಯನ್ನು ವಿರೋಧಿಸುವ ಪ್ರಕ್ರಿಯೆಗಳು ಪಕ್ಷಾಂತರ ಎಂದೆನಿಸಿಕೊಳ್ಳುವುದಿಲ್ಲ. ಅವು ಕೇವಲ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳಷ್ಟೇ ಆಗಿವೆ. ಅಲ್ಲದೇ, ಈ ಪ್ರಕರಣದಲ್ಲಿ ಸಂವಿಧಾನದ ಹತ್ತನೇ ಶೆಡ್ಯೂಲ್ನ ಪಕ್ಷಾಂತರ ನಿಷೇಧದ ನಿಬಂಧನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಅವರು ರೂಲಿಂಗ್ ನೀಡಿದರು.
2023ರ ಜುಲೈನಲ್ಲಿ ಶರದ್ ಪವಾರ್ ಅವರ ಸೋದರ ಸಂಬಂಧಿ ಅಜಿತ್ ಪವಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಶಿವಸೇನಾ– ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾಗಿ, ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ, ಅಜಿತ್ ಹಾಗೂ ಶರದ್ ಅವರ ಬಣಗಳು ವಿರೋಧಿ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದವು.
‘ಬಹುಸಂಖ್ಯಾತ ಸದಸ್ಯರ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ‘ಪಕ್ಷದಿಂದ ಅನರ್ಹಗೊಳಿಸುವ ಬೆದರಿಕೆ’ಯನ್ನು ಪಕ್ಷದ ನಾಯಕರು ಒಡ್ಡಲು ಸಾಧ್ಯವಿಲ್ಲ. 2023ರ ಜುಲೈನಲ್ಲಿ ಎನ್ಸಿಪಿಯಲ್ಲಿ ನಡೆದ ಘಟನೆಗಳು ಸ್ಪಷ್ಟವಾಗಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳೇ ಆಗಿವೆ’ ಎಂದು ನಾರ್ವೇಕರ್ ಅವರು ಹೇಳಿದ್ದು, ‘ಪಕ್ಷವು ಇಬ್ಭಾಗವಾದಾಗ ಅಜಿತ್ ಅವರ ಬಣವು ಹೆಚ್ಚು ಶಾಸಕರ ಬೆಂಬಲವನ್ನು ಹೊಂದಿತ್ತು’ ಎಂಬುದನ್ನೂ ಅವರು ಪರಿಗಣನೆಗೆ ತೆಗೆದುಕೊಂಡಿದ್ದಾರೆ.
ಅಜಿತ್ ಪವಾರ ನೇತೃತ್ವದ ಬಣವೇ ನಿಜವಾದ ಎನ್ಸಿಪಿ ಎಂದು ಭಾರತದ ಚುನಾವಣಾ ಆಯೋಗ ಕಳೆದ ವಾರ ಆದೇಶ ನೀಡಿದ ಬೆನ್ನಲ್ಲೇ ನಾರ್ವೇಕರ್ ಅವರು ಈ ರೂಲಿಂಗ್ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.