ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಗಳ ಮಂಡಳಿ (ಏಮ್ಸ್) ವೈದ್ಯಕೀಯ ವರದಿ ನೀಡಿ ಎರಡು ತಿಂಗಳು ಕಳೆದರೂ ಸಿಬಿಐ ಇಲ್ಲಿಯವರೆಗೂ ಮೌನವಾಗಿರುವುದು ಏಕೆ? ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಏಮ್ಸ್ ವೈದ್ಯಕೀಯ ವರದಿ ನೀಡಿ ಎರಡು ತಿಂಗಳು ಕಳೆದರೂ ಪ್ರಕರಣದ ತನಿಖೆಯ ಸ್ಥಿತಿಗತಿಯ ಬಗ್ಗೆ ಸಿಬಿಐ ಇಲ್ಲಿಯವರೆಗೂ ಮಾಹಿತಿ ನೀಡದಿರುವುದು ಅಚ್ಚರಿ ತಂದಿದೆ ಎಂದು ಕಾಂಗ್ರೆಸ್ ಹೇಳಿದೆ.
ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ತನಿಖಾ ಸಂಸ್ಥೆಗೆ ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ಬಿಹಾರ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆಯನ್ನು ಸಿಬಿಐ ಅನುಸರಿಸುತ್ತಿದೆಯೇ? ಅಥವಾ ಬಿಹಾರ ಚುನಾವಣೆ ಮುಗಿಯುವವರೆಗೂ ತನಿಖೆಯ ವಿಷಯಗಳನ್ನು ಬಹಿರಂಗಪಡಿಸದಿರುವಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿಬಿಐಗೆ ಹೇಳಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದೆ ಎಂದು ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ.
ಜೂನ್ 14ರಂದು ತಮ್ಮ ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ (34) ಶವವಾಗಿ ಪತ್ತೆಯಾಗಿದ್ದರು. ಸುಪ್ರೀಂ ಕೋರ್ಟ್ (ಎಸ್ ಸಿ) ಆದೇಶದ ನಂತರ ಆಗಸ್ಟ್ ನಲ್ಲಿ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಅವರಿಗೆ ಆಹಾರದಲ್ಲಿ ವಿಷ ಹಾಕಿಲ್ಲ ಎಂದು ಏಮ್ಸ್ ವೈದ್ಯಕೀಯ ವರದಿಯಲ್ಲಿ ತಿಳಿಸಿದೆ.