ಚೆನ್ನೈ: ‘ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್.ಸ್ವಾಮಿನಾಥನ್ ಅವರು ತಮ್ಮ ಕೊನೆಯ ಉಸಿರಿರುವವರೆಗೂ ರೈತರ ಹಿತ ಹಾಗೂ ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಏಳಿಗೆಗೆ ಬದ್ಧರಾಗಿದ್ದರು’ ಎಂದು ಸ್ವಾಮಿನಾಥನ್ ಅವರ ಪುತ್ರಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಹೇಳಿದ್ದಾರೆ.
ತಂದೆಯ ಅಗಲಿಕೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಉತ್ತಮವಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಅವರು ಇಹಲೋಕ ತ್ಯಜಿಸಿದರು. ಬದುಕಿದ್ದ ಕೊನೆಯ ಕ್ಷಣದವರೆಗೂ ಅವರು ರೈತರ ಹಿತಕ್ಕೆ ಬದ್ಧರಾಗಿದ್ದರು’ ಎಂದಿದ್ದಾರೆ.
#WATCH | Dr Soumya Swaminathan, former Chief Scientist and former Deputy Director General at the WHO and daughter of MS Swaminathan, says, "...He was not keeping well for the last few days... His end came very peacefully this morning... Till the end, he was committed to the… https://t.co/n8B313Q2et pic.twitter.com/0BKDqqXbse
— ANI (@ANI) September 28, 2023
‘ತಂದೆಯ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದವರಿಗೆ ಧನ್ಯವಾದಗಳು. ತಂದೆ ಹಾಗೂ ತಾಯಿ ಅವರ ಪರಂಪರೆಯನ್ನು ನಾವು ಮೂವರು ಸೋದರಿಯರು ಮುಂದುವರಿಸುತ್ತೇವೆ. ಕೃಷಿಯಲ್ಲಿ ಮಹಿಳೆಯರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ ಕೆಲವೇ ಕೆಲವು ಜನರಲ್ಲಿ ನಮ್ಮ ತಂದೆಯವರೂ ಒಬ್ಬರು. ಮಹಿಳೆಯರ ಪ್ರಗತಿಗೆ ಅವರು ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದರು’ ಎಂದು ನೆನಪಿಸಿಕೊಂಡರು.
‘ಆರನೇ ಯೋಜನಾ ಆಯೋಗದ ಸದಸ್ಯರಾಗಿದ್ದಾಗ ಮಹಿಳಾ ಸಶಕ್ತೀಕರಣ ಯೋಜನೆಯನ್ನು ನಮ್ಮ ತಂದೆ ಪರಿಚಯಿಸಿದರು. ಲಿಂಗ ಮತ್ತು ಪರಿಸರ ಎಂಬ ಪಠ್ಯವನ್ನು ಮೊದಲ ಬಾರಿಗೆ ಯೋಜನಾ ವರದಿಯಲ್ಲಿ ಸೇರಿಸಲಾಗಿತ್ತು’ ಎಂದು ಸೌಮ್ಯಾ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಉಪ ಮಹಾನಿರ್ದೇಶಕಿಯಾಗಿರುವ ಸೌಮ್ಯಾ ಅವರೊಂದಿಗೆ ಅವರ ಸೋದರಿಯರಾದ ಭಾರತೀಯ ಸಾಂಖಿಕ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಮಧುರಾ ಸ್ವಾಮಿನಾಥನ್ ಹಾಗೂ ಪೂರ್ವ ಆಂಗೇಲಿಯಾದಲ್ಲಿರುವ ಬ್ರಿಟನ್ ವಿಶ್ವವಿದ್ಯಾಲಯದ ಎನ್ಐಎಸ್ಡಿ ನಿರ್ದೇಶಕಿ ಎನ್ಐಎಸ್ಡಿ ನಿತ್ಯಾ ರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.