ಹೈದರಾಬಾದ್: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತದ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಮಾಡಿರುವ ಟೀಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಸಿಆರ್ ಟೀಕೆ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, ಮಧ್ಯಾಹ್ನದ ಬಿಸಿಯೂಟ ಮತ್ತು ಹಸಿರು ಕ್ರಾಂತಿಯಂತಹ ಯೋಜನೆಗಳನ್ನು ನಡೆಸಿದಾಗ ರಾವ್ ಎಲ್ಲಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.
ಬುಧವಾರ ನಲ್ಗೊಂಡ ಮತ್ತು ಆಲಂಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ತೆಲಂಗಾಣದಲ್ಲಿ ಇಂದಿರಾ ಗಾಂಧಿಯವರ ಕಲ್ಯಾಣ ಆಡಳಿತವಾದ ‘ಇಂದಿರಮ್ಮ ರಾಜ್ಯ’ವನ್ನು ಮರಳಿ ತರುವುದಾಗಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಕುರಿತು ರಾವ್ ಮಾಡಿರುವ ಟೀಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಂಗ್ಲಾದೇಶದ ವಿಮೋಚನೆಯ ಜೊತೆಗೆ ಹಸಿರು ಕ್ರಾಂತಿ, 20– ಅಂಶಗಳ ಕಾರ್ಯಕ್ರಮ ಮತ್ತು ಇತರ ಪ್ರಮುಖ ಬಡವರ ಪರ ಕಾರ್ಯಕ್ರಮಗಳನ್ನು ಇಂದಿರಾ ಗಾಂಧಿಯವರ ಆಡಳಿತದಲ್ಲಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಇಂದಿರಾ ಗಾಂಧಿ ಅವರ ಆಡಳಿತದಲ್ಲಿದ್ದ ಬಡತನದ ಬಗ್ಗೆ ಕೆಸಿಆರ್ ಪ್ರಶ್ನಿಸುತ್ತಿದ್ದಾರೆ ಹಾಗೂ ಇಂದಿರಾ ಗಾಂಧಿ ಅವರನ್ನು ನಿಂದಿಸುತ್ತಿದ್ದಾರೆ. ಹಸಿರು ಕ್ರಾಂತಿ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ನಡೆಯುವಾಗ ನೀವು ಎಲ್ಲಿದ್ದೀರಿ ಮತ್ತು ನೀವು ಏನು ಮಾಡುತ್ತಿದ್ದೀರಿ’ ಎಂದು ಖರ್ಗೆ ಪ್ರಶ್ನಿಸಿದರು. ಕೆಸಿಆರ್ ಇದಕ್ಕೆ ಉತ್ತರಿಸುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ನಿಂದಿಸುತ್ತಾರೆ ಅಷ್ಟೇ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್, ಕಾಂಗ್ರೆಸ್ ನಾಯಕರು ‘ಇಂದಿರಮ್ಮ ರಾಜ್ಯ’ವನ್ನು ಮರಳಿ ತರುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ, ಇಂದಿರಾ ಅವರ ಆಡಳಿತ ಅವಧಿ ಗುರುತಿಸಿಕೊಂಡಿದ್ದು ತುರ್ತು ಪರಿಸ್ಥಿತಿಯಿಂದಾಗಿ ಮತ್ತು ಆ ಅವಧಿಯಲ್ಲಿ ದಲಿತರ ಪರಿಸ್ಥಿತಿಯು ಹಾಗೆಯೇ ಉಳಿದಿತ್ತು ಎಂದು ಟೀಕಿಸಿದ್ದರು.
ತೆಲಂಗಾಣ ವಿಧಾನಸಭೆ ಚುನಾವಣೆಯು ಮಹತ್ವದಾಗಿದ್ದು, ಕೆಸಿಆರ್ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ತೆಲಂಗಾಣ ಜನತೆ ಬಯಸಿದ ಅಭಿವೃದ್ಧಿ ರಾಜ್ಯದಲ್ಲಿ ನಡೆದಿಲ್ಲ, ರಸ್ತೆಗಳಾಗಲಿ, ಶಾಲೆಗಳಾಗಲಿ, ನೀರಾವರಿ ಯೋಜನೆಗಳಾಗಲಿ ಯಾವುದು ಮಾಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ
ಕೆಸಿಆರ್, ಬಿಜೆಪಿ ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷಗಳು ಸ್ನೇಹಿತರಾಗಿದ್ದು, ಮೂರು ಪಕ್ಷಗಳು ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.