ಬೆಂಗಳೂರು:ಋತುಮತಿ ವಯಸ್ಸಿನ(10–50 ವರ್ಷ) ಹುಡುಗಿಯರು ಹಾಗೂ ಮಹಿಳೆಯರನ್ನುಶಬರಿಮಲೆ ದೇವಾಲಯಕ್ಕೆ ಪ್ರವೇಶಿಸದಂತೆ ನಡೆಯುತ್ತಿರುವ ಪ್ರತಿಭಟನೆ ವೇಳೆ ಇಬ್ಬರು ಮಹಿಳಾ ವರದಿಗಾರರ ಮೇಲೆ ಹಲ್ಲೆ ನಡೆದಿದೆ.
ಬುಧವಾರ ಸಂಜೆ 5ಕ್ಕೆ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ವಿರೋಧಿಸಿ ನಿಲಕ್ಕಲ್ ಮತ್ತು ಪಂಪಾ ಶಿಬಿರಗಳಲ್ಲಿ ಮಹಿಳಾ ಭಕ್ತಾದಿಗಳು,ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿ ಸದಸ್ಯರು ಹಾಗೂ ಇತರೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ರೂಪ ಪಡೆಯುತ್ತಿದೆ. ಪರಿಸ್ಥಿತಿಯ ಸಾಕ್ಷಾತ್ ವರದಿಗಾಗಿ ತೆರಳಿದ್ದ ದಿ ನ್ಯೂಸ್ ಮಿನಿಟ್ ಮತ್ತು ರಿಪಬ್ಲಿಕ್ ಟಿವಿ ವರದಿಗಾರ್ತಿಯರ ಮೇಲೆಪ್ರತಿಭಟನಾಕಾರರು ಹಲ್ಲೆ ನಡೆಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಭಕ್ತಾದಿಗಳನ್ನು ಶಬರಿಮಲೆಗೆ ಕರೆದೊಯ್ಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ನಲ್ಲಿ ದಿ ನ್ಯೂಸ್ ಮಿನಿಟ್ನ ಸರಿತಾ ಎಸ್ ಬಾಲನ್ ಪ್ರಯಾಣಿಸುತ್ತಿದ್ದಾಗ ಸುಮಾರು 20 ಮಂದಿ ಕರ್ಮ ಸಮಿತಿಯ ಕಾರ್ಯಕರ್ತರು ಬಸ್ ಅಡ್ಡಗಟ್ಟಿದ್ದಾರೆ. ಸರಿತಾ ಅವರನ್ನು ಬಸ್ನಿಂದ ಹೊರಗೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿಹಲ್ಲೆ ನಡೆಸಿದ್ದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಪಂಪಾದಲ್ಲಿ ಈ ಘಟನೆ ನಡೆದಿದ್ದು, ಸರಿತಾ ಬೆನ್ನಿಗೆ ಒಬ್ಬ ಕಾಲಿನಿಂದ ಒದ್ದಿದ್ದಾನೆ. ಆಕ್ರೋಶಭರಿತ ಭಕ್ತಾದಿಗಳು ಫೋಟೊ ಕ್ಲಿಕ್ಕಿಸುತ್ತ ನಿಂದಿಸಿದ್ದಾರೆ, ಹಾಗೇ ಅಯ್ಯಪ್ಪ ಜಪವನ್ನೂ ಮಾಡಿದ್ದಾರೆ! ಮಹಿಳೆಯೊಬ್ಬಳು ಸರಿತಾ ಮೇಲೆ ನೀರಿನ ಬಾಟಲಿಯನ್ನೂ ಎಸೆದಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸ್ಥಳೀಯ ಪೊಲೀಸರು ಸರಿತಾ ಅವರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಮತ್ತೊಂದು ಕಡೆ ರಿಪಬ್ಲಿಕ್ ಟಿವಿಯ ದಕ್ಷಿಣ ಭಾರತದ ಬ್ಯೂರೊ ಮುಖ್ಯಸ್ಥೆ ಪೂಜಾ ಪ್ರಸನ್ನ ಅವರ ಕಾರಿನ ಮೇಲೆ ನೂರಾರು ಮಂದಿಯ ಗುಂಪು ದಾಳಿ ನಡೆಸಿದೆ ಎಂದು ರಿಪಬ್ಲಿಕ್ ಟಿವಿ ಟ್ವೀಟಿಸಿದೆ. ಪೊಲೀಸರಿಂದ ಲಾಠಿ ಕಸಿದಿರುವ ಪ್ರತಿಭಟನಾಕಾರರು ಟಿವಿ ಮಾಧ್ಯಮದ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಕಾರು ಜಖಂಗೊಳಸಿದ್ದಾರೆ. ಪೂಜಾ ಪ್ರಸನ್ನ ಸುರಕ್ಷಿರಾಗಿದ್ದಾರೆ ಎನ್ನಲಾಗಿದೆ.
#Kerala:Protesters block and attack a woman journalist's car in Pathanamthitta #SabarimalaTemple pic.twitter.com/7TfRf2YIMi
— ANI (@ANI) October 17, 2018
ಬೆಳಿಗ್ಗೆ ಕೇರಳದ ಪತ್ರಕರ್ತೆಯೊಬ್ಬರು ಹಾಗೂ ಆಂಧ್ರ ಪ್ರದೇಶದ ಭಕ್ತೆಯೊಬ್ಬರುಶಬರಿಮಲೆಗೆ ತಲುಪುವುದನ್ನು ಪ್ರತಿಭಟನಾಕಾರರು ತಡೆದಿರುವುದು ವರದಿಯಾಗಿದೆ.ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ.
(ಎನ್ಡಿಟಿವಿ ಪ್ರತಿನಿಧಿಗಳಿಗೆ ನಿರ್ಬಂಧ ಹೇರಿದ ಪ್ರತಿಭಟನಾಕಾರರು– ವಿಡಿಯೊ)
NDTV stopped from covering protests near Kerala's #SabarimalaTemple -- reporter Sneha Mary Koshy and cameraperson SP Babu heckled and asked to leave.
— NDTV (@ndtv) October 17, 2018
Read more here: https://t.co/2icMRefVha#Sabarimala #Kerala pic.twitter.com/FgHc8tLXgv
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.