ವಿಶ್ವಸಂಸ್ಥೆ: ಕೋವಿಡ್– 19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗುತ್ತಿರುವ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್, 3,000 ಆಮ್ಲಜನಕದ ಕಾನ್ಸನ್ಟ್ರೇಟರ್ಗಳು ಸೇರಿದಂತೆ ರೋಗ ಪತ್ತೆ ಉಪಕರಣಗಳು, ಜೀವರಕ್ಷಕ ಪರಿಕರಗಳನ್ನು ರವಾನಿಸಿದೆ.
ಇದೇ ವೇಳೆ ಕೋವಿಡ್ ವಿರುದ್ಧದ ಲಸಿಕೆ ಎಲ್ಲ ಸಮುದಾಯದ ಗುಂಪುಗಳಿಗೆ ಸಮಾನವಾಗಿ ತಲುಪಲು ಹಾಗೂ ರಾಷ್ಟ್ರೀಯ ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸುವುದಕ್ಕಾಗಿ ಭಾರತ ಸರ್ಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವುದಾಗಿಯೂ ಯುನಿಸೆಫ್ ತಿಳಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ಟ್ವೀಟ್ ಉಲ್ಲೇಖಿಸಿದ ಪ್ರಧಾನ ಕಾರ್ಯದರ್ಶಿಯವರ ಉಪ ವಕ್ತಾರ ಫರ್ಹಾನ್ ಹಕ್, ‘ವಿಶ್ವಸಂಸ್ಥೆಯ ಎಲ್ಲ ವಿಭಾಗಗಳು ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತದ ಬೆಂಬಲಕ್ಕೆ ನಿಲ್ಲುತ್ತವೆ. ಈಗಿರುವ ಬೆಂಬಲವನ್ನು ಹೆಚ್ಚಿಸಲು ಸಿದ್ಧವಾಗಿವೆ‘ ಎಂದು ಹೇಳಿದ್ದಾರೆ.
ಭಾರತದ ಈಶಾನ್ಯ ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿರುವ ಕೆಲವು ಆಸ್ಪತ್ರೆಗಳಲ್ಲಿ 25 ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಯುನಿಸೆಫ್ ನೆರವು ನೀಡುತ್ತಿದೆ. ಜೊತೆಗೆ ದೇಶದಾದ್ಯಂತ ಬಂದರುಗಳಲ್ಲಿ ಥರ್ಮಲ್ ಸ್ಕ್ಯಾನರ್ಗಳನ್ನು ಅಳವಡಿಸಲು ನೆರವಾಗಿದೆ.