ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ | ಸರಪಂಚ್‌ ಸ್ಥಾನದಿಂದ ಸಿಎಂ ಗಾದಿಗೆ; ಸಾಯ್ ನಡೆದು ಬಂದ ದಾರಿ

Published 10 ಡಿಸೆಂಬರ್ 2023, 18:29 IST
Last Updated 10 ಡಿಸೆಂಬರ್ 2023, 18:29 IST
ಅಕ್ಷರ ಗಾತ್ರ

ರಾಯ‍ಪುರ: ಛತ್ತೀಸಗಢದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿಷ್ಣುದೇವ್‌ ಸಾಯ್ ಅವರು ಗ್ರಾಮದ ಸರಪಂಚ್‌ ಆಗಿ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ್ದರು. ಮೂರು ದಶಕಗಳಿಗೂ ಅಧಿಕ ಕಾಲದ ರಾಜಕೀಯ ಪಯಣದಲ್ಲಿ ಹಂತಹಂತವಾಗಿ ಮೇಲೇರಿ ಇದೀಗ ಮುಖ್ಯಮಂತ್ರಿ ಹುದ್ದೆ ನಿಭಾಯಿಸಲು ಸಜ್ಜಾಗಿದ್ದಾರೆ.

ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಜಶ್‌ಪುರ ಜಿಲ್ಲೆಯ ಬಗಿಯಾ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ (1964ರಲ್ಲಿ) ಅವರಿಗೆ ರಾಜಕೀಯವು ರಕ್ತಗತವಾಗಿಯೇ ಬಂದಿತ್ತು. ಅವರ ಅಜ್ಜ ಬುದ್ಧನಾಥ್ ಸಾಯ್ 1947ರಿಂದ 1952ರ ಅವಧಿಗೆ ನಾಮನಿರ್ದೇಶಿತ ಶಾಸಕ ಆಗಿದ್ದರು. ದೊಡ್ಡಪ್ಪ ನರಹರಿ ಪ್ರಸಾದ್ ಸಾಯ್, ಜನಸಂಘದಿಂದ ಎರಡು ಸಲ (1962–67 ಮತ್ತು 1972–77) ಶಾಸಕರಾಗಿಯೂ, ಒಂದು ಬಾರಿ ಸಂಸದರಾಗಿಯೂ (1977–79) ಆಯ್ಕೆಯಾಗಿದ್ದರು. ಇನ್ನೊಬ್ಬ ದೊಡ್ಡಪ್ಪ ಕೇದಾರನಾಥ ಸಾಯ್, ಒಂದು ಅವಧಿಗೆ (1967–72) ಶಾಸಕರಾಗಿದ್ದರು.

ಕುಂಕುರಿ ಸರ್ಕಾರಿ ಶಾಲೆಯಲ್ಲಿ ಕಲಿತ ಅವರು ಪದವಿ ಪಡೆಯಲು ಅಂಬಿಕಾಪುರಕ್ಕೆ ತೆರಳಿದ್ದರೂ, ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ತಮ್ಮ ಗ್ರಾಮಕ್ಕೆ ವಾಪಸಾಗಿದ್ದರು. 1989ರಲ್ಲಿ ಬಗಿಯಾ ಗ್ರಾಮದ ಸರಪಂಚ್‌ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಶುರುವಾದ ಅವರ ರಾಜಕೀಯ ಜೀವನ ಬಹಳಷ್ಟು ಏಳು–ಬೀಳುಗಳಿಂದ ಕೂಡಿದೆ. 

ಬಿಜೆಪಿ ಮುಖಂಡ ದಿಲೀಪ್‌ ಸಿಂಗ್‌ ಜುದೇವ್‌ ಅವರ ಸಲಹೆಯಂತೆ 1990ರಲ್ಲಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದರು. ಅದೇ ವರ್ಷ ಅವಿಭಜಿತ ಮಧ್ಯಪ್ರದೇಶದ ಜಶ್‌ಪುರ ಜಿಲ್ಲೆಯ ತ‍‍ಪಕರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1993ರಲ್ಲಿ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು.

1998ರಲ್ಲಿ ಸಮೀಪದ ಪಥ್ಲಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 2003 ಮತ್ತು 2008ರ ಚುನಾವಣೆಗಳಲ್ಲೂ ಇದೇ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. 

ಆದರೆ ಲೋಕಸಭಾ ಚುನಾವಣೆಗಳಲ್ಲಿ ಅವರದ್ದು ಯಶಸ್ಸಿನ ಓಟ. ರಾಯಗಢ ಕ್ಷೇತ್ರದಿಂದ ನಾಲ್ಕು ಸಲ ಸಂಸದರಾಗಿದ್ದ (1999, 2004, 2009 ಮತ್ತು 2014) ಅವರು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಉಕ್ಕು ಮತ್ತು ಗಣಿ ಖಾತೆಯ ರಾಜ್ಯ ಸಚಿವರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್‌ ಕೈತಪ್ಪಿತ್ತು. 

‌2006ರಿಂದ 2010ರವರೆಗೆ ಬಿಜೆಪಿ ಛತ್ತೀಸಗಢ ಘಟಕದ ಅಧ್ಯಕ್ಷರಾಗಿದ್ದ ಅವರು 2014ರಲ್ಲಿ ಅಲ್ಪ ಅವಧಿಗೆ (ಜನವರಿಯಿಂದ ಆಗಸ್ಟ್‌ವರೆಗೆ) ಈ ಜವಾಬ್ದಾರಿ ನಿಭಾಯಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ 2020ರಲ್ಲಿ ಅವರಿಗೆ ಮತ್ತೆ ಪಕ್ಷವನ್ನು ಮುನ್ನಡೆಸುವ ಹೊಣೆ ವಹಿಸಲಾಗಿತ್ತು. 

ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗ 2022ರಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಒಬಿಸಿ ಮುಖಂಡ ಅರುಣ್‌ ಸಾವ್‌ ಅವರನ್ನು ನೇಮಕ ಮಾಡಲಾಗಿತ್ತು. ವಿಷ್ಣುದೇವ್‌ ಇದೇ ವರ್ಷದ ಜುಲೈನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕ ಆಗಿದ್ದರು. 

ಭರವಸೆ ಕೊಟ್ಟಿದ್ದ ಅಮಿತ್‌ ಶಾ

ಕಳೆದ ತಿಂಗಳು ಕುಂಕುರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡುತ್ತಾ ಗೃಹ ಸಚಿವ ಅಮಿತ್‌ ಶಾ ಅವರು, ಸಾಯ್‌ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದರು. ಮಾತ್ರವಲ್ಲ, ಪ‍ಕ್ಷವು ಅಧಿಕಾರಕ್ಕೇರಿದರೆ ಅವರನ್ನು ‘ದೊಡ್ಡ ವ್ಯಕ್ತಿ’ಯನ್ನಾಗಿಸುವೆವು ಎಂಬ ಭರವಸೆಯನ್ನೂ ಕೊಟ್ಟಿದ್ದರು. 

ನಾಲ್ಕನೇ ಸಿಎಂ

ಸಾಯ್‌ ಅವರು ಛತ್ತೀಸಗಢದ ನಾಲ್ಕನೇ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಅಜಿತ್‌ ಜೋಗಿ (ಕಾಂಗ್ರೆಸ್‌), ರಮಣ್ ಸಿಂಗ್‌ (ಬಿಜೆಪಿ) ಮತ್ತು ಭೂಪೇಶ್‌ ಬಘೆಲ್‌ (ಕಾಂಗ್ರೆಸ್‌) ಅವರು ಈ ಹಿಂದೆ ಸಿ.ಎಂ ಆಗಿದ್ದರು. ರಮಣ್ ಸಿಂಗ್‌ 2003ರಿಂದ 2018ರವರೆಗೆ ಸತತ ಮೂರು ಅವಧಿಗಳಲ್ಲಿ ಕಾರ್ಯನಿರ್ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT