ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಾವು ಓದುತ್ತಿದ್ದ ವೇಳೆಯಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ಗಳು ಇರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿವಿಯ ಇಂದಿನ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮೀರ್ ಸರನ್ ಮತ್ತು ಅಖಿಲ್ ಡಿಯೋ ಬರೆದ ಪ್ಯಾಕ್ಸ್ ಸಿನಿಕಾ: ಇಂಪ್ಲಿಕೇಶನ್ಸ್ ಫಾರ್ ದಿ ಇಂಡಿಯನ್ ಡಾನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸೆಕ್ಷನ್ 370ರ ರದ್ಧತಿಯ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಇದು ನರೇಂದ್ರ ಮೋದಿ ಸರ್ಕಾರದ ಸಮಸ್ಯೆಗಳ ಪರಿಹಾರ ಮನಸ್ಥಿತಿಯ ಭಾಗವಾಗಿದೆ ಎಂದು ವಾದಿಸಿದರು.
#WATCH "I can certainly tell you, when I studied in Jawaharlal Nehru University (JNU), we didn't see any 'tukde tukde' gang there," EAM Dr S Jaishankar at an event in Delhi. pic.twitter.com/9IgIZKQolx
— ANI (@ANI) January 6, 2020
ಜೆಎನ್ಯುನಲ್ಲಿನ ಘಟನೆ ಕುರಿತು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಿಮ್ಮ ಜೆಎನ್ಯು ಸಮಸ್ಯೆಗೆ ನಾನು ಏನು ಹೇಳಲು ಸಾಧ್ಯ. ನಿನ್ನೆಯೇ ನಿಮಗೆ ಸ್ಪಷ್ಟವಾಗಿ ಹೇಳಿದ್ದೇನೆ. ಜೆಎನ್ಯುನಲ್ಲಿ ನಾನು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಲ್ಲಿ ನಾವು ಯಾವುದೇ ತುಕ್ಡೆ ತುಕ್ಡೆ ಗ್ಯಾಂಗ್ಗಳನ್ನು ನೋಡಿರಲಿಲ್ಲ ಎಂಬುದನ್ನು ಖಂಡಿತವಾಗಿ ನಿಮಗೆ ಹೇಳಬಲ್ಲೆ ಎಂದಿದ್ದಾರೆ.
Have seen pictures of what is happening in #JNU. Condemn the violence unequivocally. This is completely against the tradition and culture of the university.
— Dr. S. Jaishankar (@DrSJaishankar) January 5, 2020
ಜೆಎನ್ಯುನಲ್ಲಿ ಏನಾಗುತ್ತಿದೆ ಎಂಬುದರ ಚಿತ್ರಗಳನ್ನು ನೋಡಿದ್ದೀರಿ. ಹಿಂಸೆಯನ್ನು ನಿಸ್ಸಂಶಯವಾಗಿ ಖಂಡಿಸಿ. ಇದು ವಿಶ್ವವಿದ್ಯಾಲಯದ ಪರಂಪರೆ ಮತ್ತು ಸಂಸ್ಕೃತಿಗೆ ಸಂಪೂರ್ಣವಾಗಿ ವಿರುದ್ಧವಾದುದು ಎಂದು ಸಚಿವರು ಭಾನುವಾರ ಟ್ವೀಟ್ ಮಾಡಿದ್ದರು.
ತುಕ್ಡೆ-ತುಕ್ಡೆ ಎನ್ನುವ ಪದವನ್ನು ಎಡಪಂಥೀಯ ಗುಂಪುಗಳು ಮತ್ತು ಅವರ ಬೆಂಬಲಿಗರ ಮೇಲೆ ದಾಳಿ ಮಾಡಲು ಬಲಪಂಥೀಯ ಪಕ್ಷಗಳು ಹೆಚ್ಚಾಗಿ ಬಳಸುವ ಪದವಾಗಿದೆ. 2010ರ ಸಂಸತ್ ಭನವದ ಮೇಲಿನ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಜಾರಿಯಾಗಿತ್ತು. ಇದರ ವಿರುದ್ಧ ಜೆಎನ್ಯುನಲ್ಲಿ 2016ರ ಫೆಬ್ರುವರಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಎಡಪಂಥೀಯ ಸಂಘಟನೆಯ ಬೆಂಬಲವಿದ್ದ ಅಂದಿನ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನಾರ್ಹ ಘೋಷಣೆಗಳನ್ನು ಕೂಗಲಾಯಿತು ಎಂಬ ಆರೋಪವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಲಪಂಥೀಯ ಸಂಘಟನೆಗಳು ಎಡಪಂಥೀಯ ಸಂಘಟನೆಗಳನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ (ಭಾರತವನ್ನು ತುಂಡು ತುಂಡು ಮಾಡುವ ಉದ್ದೇಶ ಹೊಂದಿರುವ ಸಂಘಟನೆ) ಎಂಬುದಾಗಿ ಕರೆಯಲಾರಂಭಿಸಿದವು. ಅಂದಿನ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥರಾಗಿದ್ದ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.