ನವದೆಹಲಿ : ‘ಜಿ20 ಶೃಂಗಸಭೆ ಈಗ ಮುಗಿದಿದ್ದು, ಮೋದಿ ನೇತೃತ್ವದ ಸರ್ಕಾರವು ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಗಲಭೆಯಂತಹ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಗಮನಕ್ಕೆ ಜನರು ದಾರಿ ಮಾಡಿಕೊಡಲು ಆರಂಭಿಸಿದ್ದಾರೆ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಳ ಕುರಿತು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ, ಆದರೆ ಸಾರ್ವಜನಿಕರು ಸತ್ಯವನ್ನು ಮಾತ್ರ ನೋಡಲು ಮತ್ತು ಕೇಳಲು ಬಯಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಇದೀಗ ಜಿ20 ಶೃಂಗಸಭೆಯೂ ಮುಗಿದಿದ್ದು, ಮೋದಿ ಸರ್ಕಾರವು ದೇಶೀಯ ಸಮಸ್ಯೆಗಳತ್ತ ಚಿತ್ತ ಹರಿಸಬೇಕು. ಆಗಸ್ಟ್ನಲ್ಲಿ ಸಾಮಾನ್ಯ ‘ಥಾಲಿ’ಯ ಬೆಲೆ ಶೇ 24ರಷ್ಟು ಹೆಚ್ಚಾಗಿದ್ದರೆ, ನಿರುದ್ಯೋಗ ಸಮಸ್ಯೆ ಶೇ 8ರಷ್ಟು ಏರಿಕೆಯಾಗಿತ್ತು’ ಎಂದಿರುವ ಅವರು, ‘ದೇಶದ ಯುವ ಜನರ ಭವಿಷ್ಯ ಮಂಕಾಗಿದೆ’ ಎಂದಿದ್ದಾರೆ.
‘ಮೋದಿ ಸರ್ಕಾರದ ದುರಾಡಳಿತದಲ್ಲಿ ಭ್ರಷ್ಟಾಚಾರದ ಮಹಾಪೂರವೇ ಹರಿಯುತ್ತಿದೆ. ಸಿಎಜಿಯ ಹಲವು ವರದಿಗಳು ಬಿಜೆಪಿಯ ಮುಖವನ್ನು ಬಹಿರಂಗಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಲ ಜೀವನ್ ಯೋಜನೆಯಲ್ಲಿ ₹ 13,000 ಕೋಟಿ ಹಗರಣ ನಡೆದಿದೆ. ಇದರಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ದಲಿತ ಐಎಎಸ್ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.