ಬೆಂಗಳೂರು (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ದೊಡ್ಡ ರಾಜಕೀಯ ಹಿನ್ನಡೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಬಣ್ಣಿಸಿದ್ದಾರೆ.
ಫಲಿತಾಂಶದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಜನತೆಯು ‘ಸರ್ವಾಧಿಕಾರಿ’ ಬಗೆಯ ನಾಯಕತ್ವವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ಸಾಬೀತಾಗಿದೆ ಎಂದರು.
‘ಬಿಹಾರದಲ್ಲಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೇ ಬಿಜೆಪಿ ಪ್ರಚಾರ ನಡೆಸಿತ್ತು... ಆದ್ದರಿಂದ ಇಂದಿನ ಫಲಿತಾಂಶ ಮೋದಿ ಅವರಿಗೆ ದೊಡ್ಡ ರಾಜಕೀಯ ಆಘಾತ’ ಎಂದಿದ್ದಾರೆ.
ಅಲ್ಲದೇ, ‘ಕೋಮು ಸೌಹಾರ್ದವನ್ನು ಕದಡಿದ ಶಕ್ತಿಗಳ ವಿರುದ್ಧ ಜನರು ಮತ ನೀಡಿದ್ದಾರೆ. ಮೋದಿ ಹಾಗೂ ಅಮಿತ್ ಷಾ ಅವರಿಗೆ ಜನರು ಪಾಠ ಕಲಿಸಿದ್ದಾರೆ’ ಎಂದೂ ಅವರು ನುಡಿದಿದ್ದಾರೆ.