ನವದೆಹಲಿ (ಪಿಟಿಐ): ಸೂಕ್ತ ಪರಿಹಾರ, ಸರಿಯಾದ ಚಿಕಿತ್ಸೆ, ಪುನರ್ವಸತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭೋಪಾಲ್ ಅನಿಲ ದುರಂತದ ಸಂತ್ರಸ್ತರು ಬುಧವಾರ ಸಂಸತ್ ಮುಂದೆ ಪ್ರತಿಭಟನೆ ನಡೆಸಿದರು.
ಸಿಪಿಐ (ಎಂ) ನಾಯಕ ಬಸುದೇವ್ ಆಚಾರ್ಯ ಹಾಗೂ ‘ಭೋಪಾಲ್ ಅನಿಲ ದುರಂತ ಸಂತ್ರಸ್ತರ ಪರ ಹೋರಾಟ ಸಮಿತಿ’ಯ ಸಂಚಾಲಕ ಸಾದ್ನ ಕಾರ್ಣಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಂತರ, 11 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಂತ್ರಸ್ತರ ನಿಯೋಗವು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಿತು.
‘ದುರಂತದಲ್ಲಿ ಸಂತ್ರಸ್ತರಾದ 5 ಲಕ್ಷ ಹಾಗೂ ಮಡಿದ 50 ಸಾವಿರ ಜನರ ಕುಟುಂಬಗಳಿಗೆ ತಲಾ ₨ 10 ಲಕ್ಷ ಪರಿಹಾರ, ಜೀವನ ಪರ್ಯಂತ ₨ 500 ಪಿಂಚಣಿ, ಉದ್ಯೋಗ, ಪುನರ್ವಸತಿ, ಸೂಕ್ತ ಚಿಕಿತ್ಸೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಂಪೆನಿ ಹಾಗೂ ಡೌ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆಯಬೇಕು’ ಎಂಬ ಒತ್ತಾಯ ಸೇರಿದಂತೆ ಹಲವು ಬೇಡಿಕೆಗಳನ್ನು ಪತ್ರ ಒಳಗೊಂಡಿದೆ.
ಅಲ್ಲದೆ, ‘ದೇಶವನ್ನೇ ತಲ್ಲಣಗೊಳಿಸಿದ ಈ ದುರಂತದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಘಟನೆಯಲ್ಲಿ ಕೇವಲ 5,295 ಜನ ಮಾತ್ರ ಸತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿವೆ’ ಎಂದು ಪತ್ರದಲ್ಲಿ ದೂರಲಾಗಿದೆ.