ನವದೆಹಲಿ (ಪಿಟಿಐ): ‘ಭಾರತದ ವಿರುದ್ಧದ ಯಾವುದೇ ಯುದ್ಧವನ್ನು ಪಾಕಿಸ್ತಾನವು ಗೆಲ್ಲುವುದಿಲ್ಲ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸ್ಪಷ್ಟವಾಗಿ ನುಡಿದರು.
ಪಾಕಿಸ್ತಾನದ ಪ್ರಭಾವಿ ಪತ್ರಿಕೆಯೊಂದರಲ್ಲಿ ವರದಿಯಾಗಿರುವಂತೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ್ದಾರೆ ಎನ್ನಲಾದ ‘ಭಾರತದ ವಿರುದ್ಧ ನಾಲ್ಕನೇ ಯುದ್ಧ ಸಾಧ್ಯತೆ’ಯ ಹೇಳಿಕೆ ಬಗ್ಗೆ ಪ್ರಧಾನಿ ಸಿಂಗ್ ಈ ಪ್ರತಿಕ್ರಿಯಿಸಿ, ‘ನನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಯಾವುದೇ ಯುದ್ಧ ಗೆಲ್ಲುವುದಿಲ್ಲ’ ಎಂದು ತಿಳಿಸಿದರು.
ಆದರೆ, ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯವು ನವಾಜ್ ಷರೀಫ್ ಅವರು ಇಂತಹ ಹೇಳಿಕೆಯನ್ನು ನೀಡಿಲ್ಲ ಎಂದಿದೆ.
‘ಷರೀಫ್ ಇಂತಹ ಯಾವುದೇ ಶಬ್ದವನ್ನೂ ಬಳಸಿಲ್ಲ. ಪತ್ರಿಕೆಯಲ್ಲಿನ ವರದಿ ಸತ್ಯಕ್ಕೆ ದೂರ, ನಿರಾಧಾರ ಮತ್ತು ದುರುದ್ದೇಶಪೂರಿತ’ ಎಂದು ಪಾಕ್ ಹೇಳಿದೆ.
ಯುದ್ಧದ ಪ್ರಸ್ತಾಪವೇ ಇಲ್ಲ: ಷರೀಫ್ ಸ್ಪಷ್ಟನೆ (ಇಸ್ಲಾಮಾಬಾದ್ ವರದಿ): ‘ಕಾಶ್ಮೀರ ವಿವಾದವು ಪಾಕಿಸ್ತಾನ– ಭಾರತದ ನಡುವೆ ನಾಲ್ಕನೇ ಯುದ್ಧಕ್ಕೆ ಕಾರಣವಾಗಬಹುದು’ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿಕೆ ನೀಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಈ ಸಂಬಂಧ ಪಾಕ್ನ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ಬುಧವಾರ ಪ್ರಕಟವಾದ ‘ಸುದ್ದಿ ಆಧಾರರಹಿತ ಹಾಗೂ ದುರುದ್ದೇಶಪೂರಿತ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಮುಜಫರಾಬಾದ್ನಲ್ಲಿ ಮಂಗಳವಾರ ನಡೆದ ಪಾಕ್ ಆಕ್ರಮಿತ ಕಾಶ್ಮೀರದ ಪ್ರಮುಖರ ಸಭೆಯಲ್ಲಿ ನವಾಜ್ ಷರೀಫ್ ಅವರು ಮಾತನಾಡಿ, ‘ಕಾಶ್ಮೀರ ಬಿಕ್ಕಟ್ಟು ಸೂಕ್ಷ್ಮ ವಿಷಯವಾಗಿದ್ದು, ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಕಾರಣವಾಗಬಹುದೆಂದು ಅಭಿಪ್ರಾಯಪಟ್ಟಿದ್ದರು’ ಎಂದು ವರದಿಯಾಗಿತ್ತು.
ಉಭಯ ರಾಷ್ಟ್ರಗಳ ನಡುವಣ ಯಾವುದೇ ಕಗ್ಗಂಟಿನ ಪರಿಹಾರಕ್ಕೆ ಮಾತುಕತೆಯೇ ಸೂಕ್ತ ವೇದಿಕೆ ಎಂಬುದೇ ಷರೀಫ್ ಅವರ ನಂಬಿಕೆ. ಮುಜಫರಾಬಾದ್ ಸಭೆಯಲ್ಲಿ ಪ್ರಧಾನಿ ಈ ವಿಷಯ ಪ್ರಸ್ತಾಪಿಸಿದ್ದು ನಿಜ. ಭಾರತದ ಸೇನಾ ನೀತಿಯಿಂದಾಗಿ ಪಾಕ್ ಕೂಡ ಶಸ್ತ್ರಾಸ್ತ್ರ ಸಂಗ್ರಹ ಪೈಪೋಟಿಗೆ ಇಳಿಯಬೇಕಾಗಿದೆ ಎಂದು ಷರೀಫ್ ಹೇಳಿದ್ದರೇ ವಿನಾ ಯುದ್ಧದ ಮಾತನ್ನು ಆಡಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾತುಕತೆ ಆರಂಭಿಸಿ– ಖರ್ ಸಲಹೆ (ನವದೆಹಲಿ ವರದಿ): ಭಾರತ– ಪಾಕ್ ಮಾತುಕತೆ ಪ್ರಕ್ರಿಯೆ ಪುನರಾರಂಭವಾಗಬೇಕು ಎಂದಿರುವ ಪಾಕ್ ವಿದೇಶಾಂಗ ಖಾತೆ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್, ಈ ನಿಟ್ಟಿನಲ್ಲಿ ಎರಡೂ ದೇಶಗಳು ತಮ್ಮ ಹಳೆಯ ತಪ್ಪುಗಳ ಸರಕನ್ನು ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ.
‘ನಾವಿಬ್ಬರೂ (ಭಾರತ–ಪಾಕ್) ಯುವ ಸಮುದಾಯದಲ್ಲಿ ಪರಸ್ಪರ ವಿಷಬೀಜ ಬಿತ್ತಿದ್ದೇವೆ. ಹಳೆಯ ಐತಿಹಾಸಿಕ ತಪ್ಪುಗಳನ್ನು ಪುನರಾವರ್ತಿಸುವುದು ಬೇಡ. ಅಂತಹ ಸರಕನ್ನು ಕಟ್ಟಿಡೋಣ. ಅದನ್ನೇ ಮುಂದಿಟ್ಟುಕೊಂಡು ನಡೆದರೆ ಭವಿಷ್ಯಕ್ಕೆ ಕತ್ತಲು ಕವಿಯುತ್ತದೆ’ ಎಂದು ಅವರು ನವದೆಹಲಿಯಲ್ಲಿ ನಡೆದ ‘ಅಂಜೆಡಾ ಆಜ್ತಕ್’ ಸಮ್ಮೇಳನದಲ್ಲಿ ಹೇಳಿದ್ದಾರೆ.
‘ಭಯೋತ್ಪಾದನೆಯು ಭಾರತಕ್ಕಿಂತ ನಮಗೇ ಹೆಚ್ಚು ಸವಾಲುಗಳನ್ನು ಒಡ್ಡಿದೆ. ಹಫೀಜ್ ಸಯೀದ್ನನ್ನು ಎರಡು ಸಾರಿ ಬಂಧಿಸಲಾಗಿತ್ತು. ಮುಂಬೈ ಮೇಲೆ ನಡೆದ ದಾಳಿ ಬಗ್ಗೆ ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲುವಂತಹ ಸಾಕ್ಷ್ಯಗಳನ್ನು ನೀವು (ಭಾರತ) ಒದಗಿಸಿ. ಪಾಕ್ ಹಿತದೃಷ್ಟಿಯಿಂದ ಈ ಪ್ರಕರಣ ಎಷ್ಟು ಬೇಗ ಬಗೆಹರಿವುದೋ ಅಷ್ಟೂ ಒಳ್ಳೆಯದು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.