ನವದೆಹಲಿ: ‘ಕೇಂದ್ರದಲ್ಲಿ ನೂತನ ಸರ್ಕಾರ ರಚನೆಗೆ ಪ್ರಗತಿಪರ ಪಕ್ಷಗಳ ಮೈತ್ರಿಕೂಟ ಮುಂದಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಖ್ಯ ಪಾತ್ರ ವಹಿಸುವರು’ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಗುರುವಾರ ಹೇಳಿದರು.
ಅಚ್ಛೇ ದಿನ್ ಭರವಸೆ, ಕಪ್ಪು ಹಣ ವಾಪಸು ತರುವುದು ಮುಂತಾದ ಭರವಸೆಗಳನ್ನು ಈಡೇರಿಸಲು ಬಿಜೆಪಿ ಸೋತಿದೆ. ಪ್ರಶ್ನಿಸುವ ಧೋರಣೆ ಹತ್ತಿಕ್ಕಲು ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಬಿಹಾರದಲ್ಲಿ ‘ಮಹಾಘಟಬಂಧನ್’ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ರಚನೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಹಿಂದಿನಿಂದಲೂ ನಿರ್ಣಾಯಕವಾದ ಪತ್ರ ವಹಿಸುತ್ತಿವೆ. ಅದು ಬದಲಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಈಗ ದೇಶದಾದ್ಯಂತ ಆಡಳಿತ ವಿರೋಧಿ ಅಲೆ ಇದೆ. ಪ್ರತಿ ರಾಜ್ಯದ ಚುನಾವಣಾ ಫಲಿತಾಂಶವೂ ಮುಖ್ಯವಾಗಲಿದೆ ಎಂದು ಪ್ರತಿಪಾದಿಸಿದರು.