ನವದೆಹಲಿ (ಪಿಟಿಐ): ಔಪಚಾರಿಕ ಪ್ರಕರಣ ದಾಖಲು ಮಾಡಿದ ಬಳಿಕ ವಿದೇಶೀ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಇರಿಸಿದವರ ಹೆಸರುಗಳನ್ನು ಬಹಿರಂಗ ಪಡಿಸುವುದಾಗಿ ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್ ಗೆ ಭರವಸೆ ನೀಡಿತು.
ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ~ವಿದೇಶೀ ಬ್ಯಾಂಕ್ ಗಳಲ್ಲಿ ಕಪ್ಪುಹಣ ಇರಿಸಿದ ಆರೋಪಕ್ಕೆ ಒಳಗಾದವರಿಗೆ ಸರ್ಕಾರವು ಷೋಕಾಸ್ ನೋಟಿಸ್ ಜಾರಿ ಮಾಡಿದೆ. ಒಮ್ಮೆ ಅವರ ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು~ ಎಂದು ಹೇಳಿದರು.
ವಿದೇಶೀ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಇರಿಸಿದ ಆರೋಪಕ್ಕೆ ಗುರಿಯಾಗಿರುವ ಪುಣೆ ಮೂಲದ ಉದ್ಯಮಿ ಹಸನ್ ಅಲಿ ಖಾನ್ ರಾಷ್ಟ್ರ ಬಿಟ್ಟು ತೆರಳದಂತೆ ಖಾತರಿ ನೀಡಬೇಕು ಎಂದು ಪೀಠವು ಸರ್ಕಾರಕ್ಕೆ ಸೂಚಿಸಿತು.
~ಹಸನ್ ಭಾರತದಲ್ಲೇ ಇದ್ದಾನೆ. ಸರ್ಕಾರ ಆತನ ವಿರುದ್ಧ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸುಬ್ರಮಣಿಯಂ ಹೇಳಿದಾಗ, ~ಆತ ವಿಚಾರಣೆಗೆ ಲಭ್ಯನಿರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ~ ಎಂದು ನ್ಯಾಯಾಲಯವು ಅವರಿಗೆ ಸೂಚಿಸಿತು.