ನವದೆಹಲಿ (ಪಿಟಿಐ): ಬಹುದಿನಗಳ ಬೇಡಿಕೆಯಾದ ದೇವನಹಳ್ಳಿ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವಾಲಯ ಪ್ರಸ್ತಾಪ ಸಲ್ಲಿಸಿರುವುದರಿಂದ ಬುಧವಾರ ಕೇಂದ್ರ ಸಂಪುಟ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವ ವಿಷಯ ಬುಧವಾರ ಸಭೆ ಸೇರಲಿರುವ ಸಂಪುಟದ ಮುಂದೆ ಬರುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೆಂಪೇಗೌಡ ಅವರ 503ನೇ ಜಯಂತಿ ಆಚರಣೆಯ ನಂತರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ `ಬೆಂಗಳೂರು ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡಲು ಒತ್ತಡ ತರಲಾಗಿತ್ತು.
ಮರುನಾಮಕರಣ ಮಾಡುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷ ಸಲ್ಲಿಸಿದ ಪ್ರಸ್ತಾವವನ್ನು ವಿಮಾನಯಾನ ಸಚಿವಾಲಯ ಒಪ್ಪಿತ್ತು. ಈ ಸಂಬಂಧ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರೂ ಒತ್ತಡ ಹೇರಿದ್ದರು. ಆದರೆ ಕೆಲ ಸಂಘಟನೆಗಳು ಈ ಸಂಬಂಧ ಅಪಸ್ವರ ಎತ್ತಿದ್ದು ದೇವನಹಳ್ಳಿಯಲ್ಲೇ ಜನಿಸಿದ ಟಿಪ್ಪು ಸುಲ್ತಾನ್, ಸಮಾನತೆಯ ಹರಿಕಾರ ಬಸವಣ್ಣ ಇಲ್ಲವೇ ಶ್ರೇಷ್ಠ ಎಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.